Friday, May 10, 2024

ನೌಕರರ ಪುನರ್ ನೇಮಕಕ್ಕೆ ಬಿಎಂಟಿಸಿ ಮೀನಾಮೇಷ.!

ಬೆಂಗಳೂರು: ಸಾರಿಗೆ ನೌಕರರಿಗೆ ಸರ್ಕಾರಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ 2021ರ ಏಪ್ರಿಲ್ ತಿಂಗಳಲ್ಲಿ ಪ್ರತಿಭಟನಾ ನಿರತರು ಮುಷ್ಕರವನ್ನ ನಡೆಸಲಾಗಿತ್ತು. ಬರೊಬ್ಬರಿ 14 ದಿನಗಳ ಕಾಲ ನಡೆದ ಮುಷ್ಕರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸುವಂತೆ ಮಾಡಿತ್ತು. ಇದರಿಂದ ಸಾರಿಗೆ ನೌಕರರ ವಿರುದ್ದ ಕೆಂಡಮಂಡಲವಾಗಿದ್ದ ಸರ್ಕಾರ ಮುಷ್ಕರದಲ್ಲಿ ಭಾಗಿಯಾಗಿದ್ದ 4 ಸಾವಿರಕ್ಕೂ ಹೆಚ್ಚು ನೌಕರರನ್ನು ವಜಾ ಮಾಡಿದ್ರು.. ಬಿಎಂಟಿಸಿ ಒಂದರಲ್ಲೇ 2 ಸಾವಿರ ನೌಕರರನ್ನು ವಜಾ ಮಾಡಿತ್ತು ಅದರಲ್ಲಿ ಬಿಎಂಟಿಸಿಯ 800 ಟ್ರೈನಿ ನೌಕರರನ್ನು ವಾಪಸ್ ಕರೆಸಿಕೊಂಡಿದ್ದಾರೆ.. ಇನ್ನೂ ಮಿಕ್ಕ 1200 ನೌಕರರನ್ನು ಮತ್ತೆ ಕೆಲಸ ನೀಡಿಲ್ಲ.

ಅಂದಿನಿಂದ ಇಲ್ಲಿವರೆಗೂ ಕೆಲವರಿಗೆ ಕೆಲಸವೇ ಸಿಗದೆ ಪರದಾಟ ನಡೆಸುವಂತಾಗಿದೆ. ತಿನ್ನೋಕೆ ಒಪ್ಪೊತ್ತಿನ ಊಟಕ್ಕೂ ಕಾಡಿ ಬೇಡಿ ತಿನ್ನುವಂತಾಗಿದೆ. ಕಳೆದ ಒಂದು ವರ್ಷದಿಂದ ನೌಕರಿ ಇಲ್ಲದೆ ನರಕ ಅನುಭವಿಸುವಂತಾಗಿದೆ. ಸಾವು ಬಿಟ್ಟರೆ ಬೇರೆ ದಾರಿ ಇಲ್ಲ. ಪ್ರತಿಭಟನೆ, ಮುಷ್ಕರದಲ್ಲಿ ನಾನು ಭಾಗಿಯಾಗಿಲ್ಲದಿದ್ದರೂ ನನ್ನ ಕೆಲಸ ಹಾಳಾಗಿದೆ.‌ ಮುಷ್ಕರದಲ್ಲಿ ಭಾಗಿಯಾದವರಿಗೆ ಮತ್ತೆ ಕೆಲಸ ಸಿಕ್ಕಿ ಅವರ ಬದುಕು ಚನ್ನಾಗಿದೆ ಆದ್ರೆ ನನಗ್ಯಾಕೆ ಇಂತಹ ಶಿಕ್ಷೆ ಎಂದು ಸಂಬಂಧಿಸಿದ ಇಲಾಖೆ ಮತ್ತು ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ. ಇದೀಗ ನನಗೆ ಬೇರೆ ದಾರಿಯಿಲ್ಲ, ದಯವಿಟ್ಟು ದಯಾಮರಣ ಕಲ್ಪಿಸಿ ಎಂದು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸೇರಿದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಾರಿಗೆ ಸಚಿವ ಶ್ರೀರಾಮುಲು, ರಾಜಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರಿಗೆ ವಜಾಗೊಂಡ ಶಂಬುಲಿಂಗಯ್ಯ ಮಠ ಎಂಬುವವರು ಪತ್ರ ಬರೆದಿದ್ದಾರೆ.

ಇನ್ನೂ ಇತ್ತ ವಜಾಗೊಂಡ ನೌಕರ ಶಂಭುಲಿಂಗಯ್ಯ ನಾನು ಸತ್ತರೆ ಸರ್ಕಾರ ಮತ್ತು ಬಿಎಂಟಿಸಿ ಹೊಣೆ. ಒಂದು ವರ್ಷದಿಂದ ಕೆಲಸವಿಲ್ಲದೆ ನೊಂದಿದ್ದು, ಮರು ಕೆಲಸಕ್ಕಾಗಿ ಅಲೆಯದ ಕಚೇರಿ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಕೊನೆಯದಾಗಿ ಸಾವೇ ದಾರಿ ಎಂದು ನಿರ್ಣಯಿಸಿರುವ ಇವರು ದಯಾಮರಣಕೋರಿದ್ದಾರೆ. ಈ ಬಗ್ಗೆ ಗಣ್ಯರಿಗೆಲ್ಲರಿಗೂ ಪತ್ರ ಬರೆದಿದ್ದಾರೆ. ಸದ್ಯ ಅಂತಿಮವಾಗಿ ನಾನು ಏನಾದ್ರು ಪ್ರಾಣಬಿಟ್ಟರೆ ನನ್ನ ಸಾವಿಗೆ ಸರ್ಕಾರ ಮತ್ತು ಬಿಎಂಟಿಸಿಯೇ ನೇರ ಹೊಣೆ ಎಂದು ದೂರಿದ್ದಾರೆ.. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ಶ್ರೀ ರಾಮುಲು ಈ ಪತ್ರ ನನಗೆ ತಲುಪಿದೆ ನಾನು ಅವರಲ್ಲಿ ಮನವಿ ಮಾಡಿಕೊಳ್ತಿನಿ ಯಾವುದೇ ಆತುರದ ನಿರ್ಧಾರ ಕೈಗೊಳ್ಳಬೇಡಿ ನಾನು ನಿಮ್ಮೊಂದಿಗೆ ಇದ್ದೇ‌ನೆ ಎಲ್ಲರನ್ನೂ ವಾಪಸ್ ಕರೆಸಿಕೊಳ್ತಿನಿ‌ ಎಂದು ಭರವಸೆ ನೀಡಿದ್ರು

ಒಟ್ನಲ್ಲಿ ಈಗಾಗಲೇ ವಜಾಗೊಂಡ ನೌಕರರು ಮನೆ ಬಾಡಿಗೆ ಕಟ್ಟಲು ಆಗದೆ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇತ್ತ ಶಂಭುಲಿಂಗಯ್ಯ ಒಂದು ತಿಂಗಳಿನಲ್ಲಿ ಮತ್ತೆ ವಾಪಸ್ ಕರೆಸಿಕೊಳ್ಳದಿದ್ರೆ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ್ದಾನೆ ಏನಾದರೂ ಅನಾಹುತ ಸಂಭವಿಸುವ ಮುನ್ನ ಸರ್ಕಾರ ನೌಕರರನ್ನು ವಾಪಸ್ ಕರೆಸಿಕೊಳ್ಳುತ್ತಾ ಅಂತ ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES