ಕೊಡಗು : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೀನಾ (16) ಹತ್ಯೆ ಪ್ರಕರಣದ ಆರೋಪಿ ಪ್ರಕಾಶ್ (35) ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದರೆ, ಪ್ರಕಾಶ್ ತೆಗೆದುಕೊಂಡು ಹೋಗಿದ್ದ ಬಾಲಕಿಯ ರುಂಡ ಪತ್ತೆಯಾಗಿಲ್ಲ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಮೆಟ್ಟು ಗ್ರಾಮದಲ್ಲಿ ಬಾಲಕಿಯನ್ನು ಕೊಂದು ಆಕೆಯ ರುಂಡದೊಂದಿಗೆ ಆರೋಪಿ ಪರಾರಿಯಾಗಿದ್ದ. ಇದೀಗ, ಆರೋಪಿ ಪ್ರಕಾಶ್ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಆರೋಪಿ ಪತ್ತೆಗಾಗಿ ಪೊಲೀಸರು ಶೋಧಕಾರ್ಯ ಮಾಡುವ ಸಮಯದಲ್ಲಿ ಸೂರ್ಲಬ್ಬಿ ಗ್ರಾಮದಿಂದ 3 ಕಿಲೋ ಮೀಟರ್ ದೂರದ ಹಮ್ನಿಯಾಲದಲ್ಲಿ ಪ್ರಕಾಶ್ ಮೃತದೇಹ ಸಿಕ್ಕಿದೆ. ಬಾಲಕಿಯ ರುಂಡಕ್ಕಾಗಿ ಪೊಲೀಸರು ಪತ್ತೆಕಾರ್ಯ ಮುಂದುವರಿಸಿದ್ದಾರೆ.
ಒಂದು ವರ್ಷದಿಂದ ಪ್ರೀತಿಸುತ್ತಿದ್ರು
ಆರೋಪಿ ಪ್ರಕಾಶ್ ಒಂದು ವರ್ಷದಿಂದ ಮೃತ ಮೀನಾಳನ್ನು ಪ್ರೀತಿಸುತ್ತಿದ್ದ. ಇಬ್ಬರೂ ಪ್ರೀತಿಸುತ್ತಿದ್ದ ವಿಷಯ ಗ್ರಾಮದ ಜನರಿಗೂ ತಿಳಿದಿತ್ತು. ಮೀನಾಳನ್ನು ತನ್ನ ಬೈಕಿನಲ್ಲಿಯೇ ಶಾಲೆಗೆ ಕರೆದುಕೊಂಡು ಹೋಗುವುದು, ಮನೆಗೆ ಡ್ರಾಪ್ ಮಾಡುವುದು ಮಾಡುತ್ತಿದ್ದ. ಈ ನಡುವೆ ಮೃತ ಮೀನಾ ಶಾಲೆಗೆ ಹೋಗುವುದನ್ನ ನಿಲ್ಲಿಸಿದ್ದಳು. ಆರೋಪಿ ಪ್ರಕಾಶ್ ಜೊತೆ ಹೆಚ್ಚು ಕಾಲ ಇರುತ್ತಿದ್ದಳು.
SSLCಯಲ್ಲಿ ಮೃತ ಮೀನಾ ಪಾಸ್
ಮೃತ ಬಾಲಕಿ ಎರಡು ತಿಂಗಳ ಹಿಂದೆ ಪುನಃ ಶಾಲೆಗೆ ವಾಪಸ್ ಬಂದಿದ್ದಳು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ನೀಡಿ ಎಂದು ಶಿಕ್ಷಕರ ಬಳಿ ಕೇಳಿದ್ದಳು. ಅದರಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಳು. ನಿನ್ನೆ ಪ್ರಕಟಗೊಂಡ ಫಲಿತಾಂಶದಲ್ಲಿ ಮೃತ ಮೀನಾ ತೇರ್ಗಡೆಯಾಗಿದ್ದಳು. ಈ ಮಧ್ಯೆ ತನ್ನ ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯನ್ನು ಎಳೆದೊಯ್ದು ರುಂಡ ಕತ್ತರಿಸಿ, ಕೊಲೆ ಮಾಡಿದ್ದ.