ಬೆಂಗಳೂರು : ಡೌಟೇ ಇಲ್ಲ, ಈ ಕಾಂಗ್ರೆಸ್ ಸರ್ಕಾರ ಉಳಿಯಲ್ಲ. ಸರ್ಕಾರ ಉಳಿಯಲ್ಲ ಅಂತ ಕಾಂಗ್ರೆಸ್ನವರೇ ಹೇಳುತ್ತಿದ್ದಾರೆ ಎಂದು ಸರ್ಕಾರದ ಪತನದ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ಜನ ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿ ಇಲ್ಲ ಅಂತ ಹೇಳಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ
ಇದು ಪಾಪಿ ಸರ್ಕಾರ, ಅಭಿವೃದ್ಧಿ ಮಾಡದ ಸರ್ಕಾರ. ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಾಂಗ್ರೆಸ್ ಶಾಸಕರು ಅಭಿವೃದ್ಧಿ ಆಗಿಲ್ಲ ಅಂತ ಬೇಜಾರಲ್ಲಿದ್ದಾರೆ. ಕಾಂಗ್ರೆಸ್ನವರಿಗೆ ಮಾನ ಮರ್ಯಾದೆ ಇಲ್ಲ. ಬರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಬೀಳುವ ಹಂತಕ್ಕೆ ಬಂದಿದೆ. ಮುಂದೆ ಪಿಕ್ಚರ್ ಬಾಕಿ ಇದೆ. ಮಹಾರಾಷ್ಟ್ರದಲ್ಲಿ ಏನಾಗಿದೆ ಅಂತ ಎಲ್ಲರೂ ನೋಡಿದೀರಿ ಎಂದು ಆರ್. ಅಶೋಕ್ ಸರ್ಕಾರ ಪತನದ ಸುಳಿವು ನೀಡಿದ್ದಾರೆ.
ಕುಮಾರಸ್ವಾಮಿ, ಡಿಕೆಶಿ ಬಗೆಹರಿಸಿಕೊಳ್ಳುತ್ತಾರೆ
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಮಾತನಾಡಿ, ಪೆನ್ ಡ್ರೈವ್ ಪ್ರಕರಣ ಎರಡು ಕುಟುಂಬಗಳ ನಡುವೆ ನಡೆಯುತ್ತಿದೆ. ಇದಕ್ಕೆ ರಾಜ್ಯದ ಜನರನ್ನು ಎಳೆದು ತರುವುದು ಬೇಡ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬಗೆಹರಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಅವ್ರ ಕುಟುಂಬದ ಜಗಳದಲ್ಲಿ ಬಿಜೆಪಿ ಎಂಟ್ರಿ ಆಗಲ್ಲ
ಈ ಪ್ರಕರಣದಿಂದ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಧಕ್ಕೆ ಆಗಲ್ಲ. ನಮಗೆ ಈ ಸುದ್ದಿ ಬೇಡ, ರಾಜ್ಯದ ಜನರ ಒಳಿತು ಬೇಕು. ಡಿಕೆಶಿ ಮತ್ತು ಕುಮಾರಸ್ವಾಮಿ ಕುಟುಂಬದ ನಡುವಿನ ವೈಯಕ್ತಿಕ ಜಗಳ ಇದು. ಇಬ್ಬರ ಕೌಟುಂಬಿಕ, ವೈಯಕ್ತಿಕ ಜಗಳದಿಂದ ರಾಜ್ಯ ಜನರಿಗೆ ಅನ್ಯಾಯ ಆಗುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ, ಇದರಲ್ಲಿ ಎರಡು ಮಾತಿಲ್ಲ. ಆದರೆ, ಇವರ ಕುಟುಂಬದ ಜಗಳದಲ್ಲಿ ಬಿಜೆಪಿ ಎಂಟ್ರಿ ಆಗಲ್ಲ ಎಂದು ಆರ್. ಅಶೋಕ್ ತಿಳಿಸಿದ್ದಾರೆ.