ಮೈಸೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ನಿಮಗೇನಾದರೂ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಮುಚ್ಚಿ ಹಾಕುವ ಬಗ್ಗೆ ಹೇಳಿದ್ದಾರಾ? ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪ್ರಶ್ನೆ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರೇ, ರಾಜ್ಯಪಾಲರಿಗೆ ಏನು ಮನವಿ ಮಾಡಿದ್ದೀರಾ? ನಿಮಗೆ ಸಂತ್ರಸ್ತೆಯರ ಬಗ್ಗೆ ಕಾಳಜಿ ಇಲ್ವಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಅವರೇ ಎರಡು ಬಾರಿ ಸಿಎಂ ಆಗಿದ್ದೀರಿ. ನಿಮ್ಮನ್ನು ಎರಡನೇ ಬಾರಿ ಸಿಎಂ ಮಾಡಿದ್ದು ಕಾಂಗ್ರೆಸ್ ಪಕ್ಷ. ನಿಮ್ಮ ತಂದೆಯನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಮರೆಯಬೇಡಿ. ಅಮಿತ್ ಶಾ ನಿಮಗೇನಾದರೂ ಕೇಸ್ ಮುಚ್ಚಿ ಹಾಕುವ ಬಗ್ಗೆ ಹೇಳಿದ್ದಾರಾ? ಬಿಜೆಪಿಯ ಸ್ಕ್ರಿಪ್ಟ್ನ ನೀವು ಓದುತ್ತಿದ್ದಿರಾ? ಪೆನ್ ಡ್ರೈವ್ ಹಂಚಿದ್ದು ಯಾರು ಆಮೇಲೆ ನೋಡೋಣ. ವಿಡಿಯೋ ಮಾಡಿದ್ದು ಯಾರು? ನಿಮ್ಮ ಅಣ್ಣನ ಮಗ ಪ್ರಜ್ವಲ್ ಅಲ್ವಾ? ಎಂದು ಕಿಡಿಕಾರಿದ್ದಾರೆ.
ರೇಪ್ ಮಾಡಿದ್ದು ಪ್ರಜ್ವಲ್ ತಾನೇ?
ಹೆಣ್ಣು ಮಕ್ಕಳನ್ನು ರೇಪ್ ಮಾಡಿ ವಿಡಿಯೋ ಮಾಡಿದ್ದು ಆತನೇ ತಾನೇ? ರಾಜ್ಯದ ಮಾನ ಮರ್ಯಾದೆಯನ್ನು ರಾಷ್ಟ್ರದ ಮಟ್ಟದಲ್ಲಿ ಹಾಳು ಮಾಡಿದ್ದೀರಿ. ಬೆಂಗಳೂರಿನ ಮಾನ ಮರ್ಯಾದೆ ಹರಾಜು ಹಾಕಿದ್ದೀರಿ. ಮೊದಲು ಪ್ರಜ್ವಲ್ ರೇವಣ್ಣರನ್ನು ಕರೆ ತನ್ನಿ. ನೀರವ ಮೋದಿ, ವಿಜಯ್ ಮಲ್ಯ ಯಾರನ್ನೂ ಬಿಜೆಪಿ ಸರ್ಕಾರ ಕರೆ ತರಲಿಲ್ಲ. ಪ್ರಜ್ವಲ್ ರೇವಣ್ಣನ ವಿಚಾರದಲ್ಲೂ ಇದೇ ಆಗಲಿದೆ. ಪ್ರೆಸ್ಮೀಟ್ ಮಾಡಿ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದೀರಾ? ಎಂದು ಆಕ್ರೋಶ ಹೊರಹಾಕಿದ್ದಾರೆ.
ಆತನನ್ನ ಮಂಪರು ಪರೀಕ್ಷೆಗೆ ಒಳಪಡಿಸಿ
ಬಿಜೆಪಿ ಮುಖಂಡ ದೇವರಾಜ್ ಗೌಡ ಕ್ರಿಮಿನಲ್ ಬ್ಯಾಗ್ ಗ್ರೌಂಡ್ ಇರುವ ವ್ಯಕ್ತಿ. ಆತ ಕೊಟ್ಟ ಪೆನ್ಡ್ರೈವ್ ನೋಡಿಲ್ಲ ಅಂತೀರಾ? ನಿಮ್ಮ ನಿಲುವು ಸ್ಪಷ್ಟ ಪಡಿಸಿ. ನಾನು ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ. ದೇವರಾಜೇಗೌಡರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ. ಆತ ದುಡ್ಡು ಮಾಡಲು ಇದೆಲ್ಲ ಮಾಡಿದ್ದಾನೆ. ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಎಂದು ಎಂ. ಲಕ್ಷ್ಮಣ್ ಒತ್ತಾಯಿಸಿದ್ದಾರೆ.