ಹುಬ್ಬಳ್ಳಿ : ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂತಹ ಪ್ರಕರಣಗಳು ನಡೆದಿಲ್ಲ. ಹಾಗಾಗಿ, ಸಿಬಿಐಗೆ ಕೊಡುವ ಪ್ರಶ್ನೆಯೇ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಇಂತಹ ಪ್ರಕರಣಗಳು ನಡೆಯುತ್ತಲೇ ಇದ್ದಾವೆ. ಹಾಗಾಗಿ, ಈ ಪ್ರಕರಣವನ್ನು ಸಿಬಿಐಗೆ ಕೊಡಿ ಅಂತ ಕೇಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಿಮ್ಮ ಸರ್ಕಾರ ಮಂತ್ರಿ ಕೃಷ್ಣಬೈರೇಗೌಡ್ರು ಹೇಳುತ್ತಿದ್ದಾರೆ, ಜಗತ್ತಿನ ಅತ್ಯಂತ ಲೈಂಗಿಕ ಶೋಷಣೆಯ ಹಗರಣ ಅಂತ ಆರೋಪಿಸಿದ್ದಾರೆ. ಹಾಗಾದ್ರೆ, ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಯಾಕೆ ನೀವು ಸಿಬಿಐಗೆ ಕೊಡುತ್ತಿಲ್ಲ? ರಾಜಕೀಯವಾಗಿ ಕೆಲವರನ್ನ ಮುಗಿಸಬೇಕು ಅಂತ ಈ ಪ್ರಕರಣವನ್ನ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಮಹಿಳಾ ಕುಲಕ್ಕೆ ಅಪಮಾನ ಮಾಡುತ್ತಿದೆ
ಎಸ್ಐಟಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ರಾಜ್ಯ ಸರ್ಕಾರ (ಸಿಎಂ, ಡಿಸಿಎಂ)ದ ಅಣತಿಯಂತೆ ತನಿಖೆ ಮಾಡಬೇಕು ಅಂತ ಎಸ್ಐಟಿ ತಿರ್ಮಾನ ಮಾಡಿದೆ. ಇದನ್ನ ನಾನು ಖಂಡಿಸುತ್ತೇವೆ. ರಾಜಕೀಯವಾಗಿ ಇದನ್ನ ಬಳಸಿಕೊಳ್ಳಲು ಸರ್ಕಾರ ತಿರ್ಮಾನ ಮಾಡಿರುವುದು, ಇಡೀ ಮಹಿಳಾ ಕುಲಕ್ಕೆ ಅಪಮಾನ ಮಾಡಿದ ಹಾಗೆ ಎಂದು ಕಿಡಿಕಾರಿದ್ದಾರೆ.
ಡಿಕೆಶಿ ರಾಜೀನಾಮೆಗೆ ಒತ್ತಾಯ ಮಾಡುತ್ತಿಲ್ಲ
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಅವರ ಬಗ್ಗೆ ನೇರವಾಗಿ ಮಾತನಾಡಿದ್ದಾರೆ. ನ್ಯಾಯಾಲಯದಲ್ಲಿ ಕೂಡ ಹಲವಾರು ವಿಷಯಗಳು ಹೊರ ಬಂದಿವೆ. ನಾನೇನು ಡಿ.ಕೆ. ಶಿವಕುಮಾರ್ ಅವರ ರಾಜೀನಾಮೆಗೆ ಒತ್ತಾಯ ಮಾಡುತ್ತಿಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸಲಿ, ಸರಿಯಾಗಿ ತನಿಖೆ ನಡೆಯುತ್ತದೆ ಎಂದು ಪ್ರಲ್ಹಾದ್ ಜೋಶಿ ಒತ್ತಾಯಿಸಿದ್ದಾರೆ.