ಧಾರವಾಡ : ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹತ್ಯೆ ಘಟನೆಯನ್ನ ಖಂಡಿಸುತ್ತೇವೆ. ಆರೋಪಿ ಫಯಾಜ್ಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದಿಂದ ನಾಳೆ ಅರ್ಧ ದಿನ ಸ್ವಯಂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುತ್ತೇವೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ರವರೆಗೆ ಅಂಗಡಿ ಧಾರವಾಡ ಬಂದ್ ಇರಲಿದೆ ಎಂದಿದ್ದಾರೆ.
ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯಾಗಿರುವುದು ದುರ್ದೈವದ ಸಂಗತಿ. ನಮ್ಮ ಮಹಾನಗರದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಘಟನೆಯನ್ನು ಖಂಡಿಸುತ್ತೇವೆ. ಅಂಗಡಿಗಳ ಮೇಲೆ ಜಸ್ಟೀಸ್ ಫಾರ್ ನೇಹಾ ಅಂತ ಸ್ಟಿಕ್ಕರ್ ಹಚ್ಚುತ್ತೇವೆ ಎಂದು ಇಸ್ಮಾಯಿಲ್ ಹೇಳಿದ್ದಾರೆ.
ಅವಳು ನಿರಂಜನ ಮಗಳಲ್ಲ, ನಮ್ಮ ಮಗಳು
ಫಯಾಜ್ ಮಾಡಿರುವುದು ಹೀನ ಕೆಲಸ. ಅವಳು ನಿರಂಜನ ಮಗಳಲ್ಲ, ನಮ್ಮ ಮಗಳು. ಕೊಲೆ ಆರೋಪಿ ಫಯಾಜ್ಗೆ ಕಠಿಣ ಶಿಕ್ಷೆ ಆಗಬೇಕು. ಈಗಾಗಲೇ ಪೊಲೀಸ್ ಆಯುಕ್ತರಿಗೆ ಮನವಿ ಕೊಟ್ಟಿದ್ದೇವೆ. ಇದು ವಿಶೇಷ ಪ್ರಕರಣ ಎಂದು ತಿಳಿದು 90 ದಿನದಲ್ಲಿ ಪ್ರಕರಣ ಬಗೆಹರಿಸಬೇಕು. ಸಮಾಜ ಯಾವುದೇ ಇರಲಿ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಶೀಘ್ರದಲ್ಲಿ ಅಪರಾಧಿಗೆ ಶಿಕ್ಷೆ ಆಗಬೇಕು
ನಮಗೆ ಆತಂಕ ಆಗಿರೋದು ವಿದ್ಯಾರ್ಥಿನಿ ಹತ್ಯೆಯಾಗಿದ್ದು. ಇದು ನಮಗೆ ಬಹಳ ನೋವು ತಂದಿದೆ. ನಮ್ಮದು ಸಹ ಶಿಕ್ಷಣ ಸಂಸ್ಥೆ ಇದೆ. ಮುಂದಿನ ದಿನಗಳಲ್ಲಿ ಯಾವ ಸಂಸ್ಥೆಯಲ್ಲಿಯೂ ಇಂಥ ಘಟನೆ ನಡೆಯಬಾರದು. ಸಮಾಜ ಯಾವುದೇ ಇರಲಿ, ತಕ್ಕ ಶಿಕ್ಷೆ ಆಗಬೇಕು. ಅತಿ ಶೀಘ್ರದಲ್ಲಿ ಅಪರಾಧಿಗೆ ಶಿಕ್ಷೆ ಆಗಬೇಕು. ಇಂಥ ಘಟನೆಗಳು ಎಲ್ಲಿಯೂ ಆಗಬಾರದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಅಂಜುಮನ್ ಸಂಸ್ಥೆ ಮುಖಂಡರು ಇಂದು ನೇಹಾ ಮನೆಗೆ ತೆರಳಿ, ನೇಹಾ ತಂದೆ ನಿರಂಜನ ಹಿರೇಮಠ ಮತ್ತು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.