ಶಿವಮೊಗ್ಗ : ಬಿ.ಎಸ್. ಯಡಿಯೂರಪ್ಪ ಕುಟುಂಬದ ಕೈಗೆ ಸಿಕ್ಕು ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 66 ಸ್ಥಾನಕ್ಕೆ ಇಳಿಯಿತು. ಯಡಿಯೂರಪ್ಪ ಕುಟುಂಬದಿಂದ ಬಿಜೆಪಿ ಮುಕ್ತ ಮಾಡುತ್ತೇನೆ ಎಂದು ಶಿವಮೊಗ್ಗ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಸವಾಲ್ ಹಾಕಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಈ ಮುಕ್ತ ಮಾಡುವುದಕ್ಕೆ ನಾನು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಹಿಂದೂ ಪರ ಇರುವ ನಾಯಕರಿಗೆ ನೋವು ಆಗಿದೆ. ಅವರೆಲ್ಲರೂ ನನಗೆ ಸಾಥ್ ನೀಡಿದ್ದಾರೆ. ಎಲ್ಲರೂ ಸೇರಿ ಬಿಜೆಪಿ ಪಕ್ಷದ ಶುದ್ಧೀಕರಣ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಹಿಂದುಳಿದ ದಲಿತರು ಬೇರೆಯವರ ಜೊತೆ ಹೋಗಿದ್ದಾರೆ. ನನಗೆ ನ್ಯಾಯಾಲಯದಲ್ಲಿ ಕ್ಲೀನ್ ಚಿಟ್ ಸಿಕ್ಕಿತ್ತು. ನನಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಮೋಸ ಮಾಡಿದರು. ಶಿವಮೊಗ್ಗ ವಿಧಾನಸಭೆ ಕ್ಷೇತ್ರದಿಂದ ಎರಡು ದಿನ ಮೊದಲು ನನಗೆ ಚುನಾವಣೆ ನಿಲ್ಲದಂತೆ ಸೂಚನೆ ಬಂದಿತ್ತು. ನನಗೆ ಯಾಕೆ ಟಿಕೆಟ್ ನೀಡಲಿಲ್ಲ? ನಾನು ಏನು ತಪ್ಪು ಮಾಡಿದ್ದೆ? ಎಂದು ಪ್ರಶ್ನೆ ಮಾಡಿದರು.
ಅಮಿತ್ ಶಾ ಒಬ್ಬ ಉಕ್ಕಿನ ಮನುಷ್ಯ
ಇಂದು ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನನಗೆ ಕರೆ ಮಾಡಿದ್ದರು. ಅಮಿತ್ ಶಾ ಒಬ್ಬ ಉಕ್ಕಿನ ಮನುಷ್ಯ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ದೇಶ ಭಕ್ತರು ಎಂದು ಕೊಂಡಾಡಿದರು. ಅಲ್ಲದೇ, ಭಾಷಣ ಆರಂಭಕ್ಕೂ ಮುನ್ನ ಈಶ್ವರಪ್ಪ ಅವರು, ನರೇಂದ್ರ ಮೋದಿ ಪರ ಘೋಷಣೆ ಕೂಗಿದರು.