ಬೆಂಗಳೂರು : ಲೋಕಸಭೆಯ ಚುನಾವಣಾ ಪ್ರಚಾರದ ಕಾವು ಜೋರಾಗಿದೆ. ರಾಜ್ಯದಲ್ಲಿ ಸ್ಪರ್ಧಿಸಿರುವ ಬಿಜೆಪಿ ಪರ ಪ್ರಚಾರಕ್ಕೆ ಕೇಂದ್ರ ಸಚಿವ ಅಮಿತ್ ಶಾ ಅವರು ಬಂದ ಬಳಿಕ ರಾಜ್ಯದಲ್ಲಿ ನರೇಂದ್ರ ಮೋದಿ ಶಕ್ತಿ ಇನ್ನಷ್ಟು ಜಾಸ್ತಿ ಆಗಲಿದೆ. ನಾವು ಈ ಬಾರಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಚುನಾವಣಾ ರ್ಯಾಲಿ ವೇಳೆ ಮಾತನಾಡಿದ ಆರ್. ಅಶೋಕ್, ಮಂಗಳವಾರ ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಅಮಿತ್ ಶಾ ರೋಡ್ ಶೋ ಮಾಡುತ್ತಾರೆ. ಬಳಿಕ ಸಂಜೆ ಕೋರ್ ಕಮಿಟಿ ಸಭೆ ಮಾಡುತ್ತಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮೋದಿ ಅಲೆ ಇದೆ
ಗುಪ್ತಚರ ವರದಿಯಲ್ಲಿ ಕಾಂಗ್ರೆಸ್ 11-14 ಸ್ಥಾನ ಗೆಲ್ಲುತ್ತದೆ ಎಂದು ಸಿಎಂಗೆ ರಿಪೋರ್ಟ್ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಕಳೆದ ಬಾರಿ ಸಹ 20 ಸೀಟ್ ಗೆಲ್ಲುತ್ತಾರೆ ಎಂದು ರಿಪೋರ್ಟ್ ಕೊಟ್ಟಿದ್ದರು. ಆದರೆ ಕೇವಲ ಒಂದು ಸ್ಥಾನ ಗೆದ್ದರು. ಈಗಲೂ ಅಷ್ಟೇ, ಒಂದು ಸ್ಥಾನ ಗೆಲ್ಲುತ್ತಾರೆ. ರಾಜ್ಯದಲ್ಲಿ ಮೋದಿ ಅಲೆ ಇದೆ ಎಂದರು.
ಡಿ.ಕೆ ಶಿವಕುಮಾರ್ ಬೆಂಗಳೂರು ಉಸ್ತುವಾರಿಯಾದ ಹತ್ತೇ ತಿಂಗಳಲ್ಲಿ ನೀರಿಲ್ಲ
ಅಪಾರ್ಟ್ಮೆಂಟ್ ನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಚಾರದ ವೇಳೆ ರಾಮ ಮಂದಿರ ಮುಖ್ಯವಲ್ಲ. ರಾಜ್ಯದಲ್ಲಿ ಇರೋದು ಕಾಂಗ್ರೆಸ್ ಸರ್ಕಾರ ಎಂಬ ಹೇಳಿಕೆ ಸಂಬಂಧ ಮಾತನಾಡಿ, ಡಿ.ಕೆ ಶಿವಕುಮಾರ್ ಬೆಂಗಳೂರು ಉಸ್ತುವಾರಿಯಾದ ಹತ್ತೇ ತಿಂಗಳಲ್ಲಿ ನೀರಿಲ್ಲ. ಇನ್ನು ಸಿಎಂ ಸಿದ್ದರಾಮಯ್ಯ ರಾಜ್ಯ ಉಸ್ತುವಾರಿ, ಆದರೆ ರಾಜ್ಯಾದ್ಯಂತ ಬರ ಇದೆ. ಜನರಿಗೆ ಎಲ್ಲವೂ ಗೊತ್ತಿದೆ ಎಂದು ಟಾಂಗ್ ನೀಡಿದರು.