Saturday, May 11, 2024

ಉಚಿತ ‘ಆಹಾರ ಆಫರ್’ ನೀಡಿದವರಿಗೆ ಸಂಕಷ್ಟ : ಮಾಲೀಕರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೆಲ ಹೋಟೆಲ್​ ಮಾಲೀಕರು ಮತದಾನ ಮಾಡಿದವರಿಗೆ ಉಚಿತ ಆಹಾರವೆಂದು ಆಫರ್​ ನೀಡಿದ್ದರು.

ನಾಳೆ (ಮೇ 10) ಮತದಾನ ಮಾಡಿ ಕೈ ಬೆರಳಿಗೆ ಹಾಕಿರುವ ಶಾಯಿ ಗುರುತನ್ನು ತೋರಿಸಿದವರಿಗೆ ಉಚಿತ ಆಹಾರ ನೀಡಲಾಗುವುದು ಎಂದು ಬೆಂಗಳೂರಿನ ಎರಡು ಹೋಟೆಲ್ ಮಾಲೀಕರು ಘೋಷಿಸಿದ್ದರು. ಆದರೆ, ಚುನಾವಣಾ ಆಯೋಗವು ಹೋಟೆಲ್​ಗಳ ನಿರ್ಧಾರಕ್ಕೆ ಬ್ರೇಕ್​ ಹಾಕಿದೆ.

ಹೋಟೆಲ್​​ಗಳು ಮತದಾರರಿಗೆ ಉಚಿತ ಆಹಾರ ನೀಡಿದ್ದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ತನ್ನ ಪ್ರಕಟಣೆ ಬಿಡುಗಡೆ ಮಾಡಿದೆ. ಇನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಮತದಾನದ ದಿನದಂದು ಉಚಿತವಾಗಿ ಆಹಾರ, ಪಾನೀಯಗಳನ್ನು ವಿತರಿಸುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಹಣ ಹಂಚೋಕೆ ಮುನ್ನ ಎಚ್ಚರ..! 2,896 FIR ದಾಖಲು

ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ

ಈಗಾಗಲೇ ಮಾಧ್ಯಮಗಳಲ್ಲಿ ಕೆಲವೊಂದು ಹೋಟೆಲ್‌ಗಳ ಮುಂಭಾಗದಲ್ಲಿ ಮತದಾನ ಮಾಡಿ ಬರುವ ಮತದಾರರು ಗುರುತು ತೋರಿಸಿದಲ್ಲಿ ಉಚಿತವಾಗಿ/ರಿಯಾಯಿತಿ ದರದಲ್ಲಿ ತಿಂಡಿ, ಪಾನಿಯ ಹಾಗೂ ಊಟದ ವ್ಯವಸ್ಥೆ ಕಲ್ಪಿಸುವುದಾಗಿ ಬೋರ್ಡ್‌ಗಳನ್ನು ಅಳವಡಿಸಿರುವುದು ಕಂಡುಬಂದಿದೆ. ಇದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ರೀತಿಯ ಪ್ರಕಟಣೆಗಳಿಗೆ ಸಂಬಂಧಿಸಿದ ಹೋಟೆಲ್ ಮಾಲೀಕರನ್ನೇ ನೇರೆ ಹೊಣೆಗಾರರನ್ನಾಗಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮಾದರಿ ನೀತಿ ಸಂಹಿತಿಯು ಜಾರಿಯಲ್ಲಿದ್ದು, ಮೇ 10ರಂದು ಮತದಾನವು ನಡೆಯಲಿದೆ. ಮೇ 13 ರಂದು ಮತ ಎಣಿಕೆ ಕಾರ್ಯವು ನಡೆಯಲಿದೆ.

RELATED ARTICLES

Related Articles

TRENDING ARTICLES