Friday, May 10, 2024

ರಿಷಬ್ ಶೆಟ್ಟಿ ಕಾಂತಾರ ಕಿಚ್ಚು.. ಕಿಶೋರ್ ಖಾಕಿ ಖದರ್ ಮಸ್ತ್

ಹೊಂಬಾಳೆ ಬ್ಯಾನರ್​ ಅಡಿಯಲ್ಲಿ ವಿಶ್ವಮಟ್ಟದಲ್ಲಿ ಸದ್ದು ಮಾಡ್ತಿರೋ ಮತ್ತೊಂದು ಸಿನಿಮಾ ಕಾಂತಾರ. ರಿಷಬ್​​​ ಶೆಟ್ಟಿ ಸಿನಿ ಮಾಂತ್ರಿಕತೆಯಲ್ಲಿ ತಯಾರಾಗಿರೋ ಕರಾವಳಿ ಕಥೆ ಕಾಂತಾರ. ಟ್ರೈಲರ್​​​ ರಿಲೀಸ್​ ಆದ ಕೆಲವೇ ಕ್ಷಣಗಳಲ್ಲಿ ಲಕ್ಷಗಟ್ಟಲೆ ವೀವ್ಸ್​ ಸಂಪಾದಿಸಿದ್ದು ಸಖತ್​ ಹೈಪ್​ ಕ್ರಿಯೇಟ್​ ಮಾಡಿದೆ. ಸಿನಿಮಾ ಮೇಕಿಂಗ್​ ಸ್ಟೈಲ್​​ಗೆ ಸಿನಿಪ್ರಿಯರು ಕ್ಲೀನ್​ ಬೋಲ್ಡ್ ಆಗಿದ್ದಾರೆ. ಯೆಸ್​​.. ಕಾಂತಾರ ಸಿನಿಮಾ ಟ್ರೈಲರ್​​​ ಹೈಲೈಟ್ಸ್​​ ಬಗ್ಗೆ ನಾವ್​ ಹೇಳ್ತಿವಿ. ನೀವೇ ಓದಿ.

  • ಕರಾವಳಿ ಕಲೆ ಕಂಬಳದಾಟ.. ರಿಷಬ್ ​​​- ಕಿಶೋರ್​ ಕಾದಾಟ..!

ರಿಕ್ಕಿ, ಕಿರಿಕ್​ ಪಾರ್ಟಿ, ಸಹಿಪ್ರಾ ಶಾಲೆ ಕಾಸರಗೋಡು ಹೀಗೆ ಸಾಲು ಸಾಲು ಭರ್ಜರಿ ಹಿಟ್​ ಸಿನಿಮಾಗಳನ್ನು ನೀಡಿರುವ ಜನಪ್ರಿಯ ನಿರ್ದೇಶಕ ರಿಷಬ್​ ಶೆಟ್ಟಿ. ಈಗ ಮತ್ತೊಂದು  ಕರಾವಳಿಯ ಕಥೆ ಮ್ಯಾಜಿಕ್​ ಮಾಡೋಕೆ ಸಜ್ಜಾಗಿದೆ. ಸದ್ಯ ಕಾಂತಾರ ಚಿತ್ರದ ಟ್ರೈಲರ್​ ರಿಲೀಸ್​ ಆಗಿದ್ದು ಸಖತ್​ ಸೌಂಡ್​ ಮಾಡ್ತಿದೆ. ಹೀರೋ ಕಮ್​ ಡೈರೆಕ್ಟರ್​ ಆಗಿ ರಿಷಬ್​​ ತಮ್ಮ ಸಾಮಾರ್ಥ್ಯವನ್ನು  ಮತ್ತೊಮ್ಮೆ ಪ್ರೂವ್​ ಮಾಡಲಿದ್ದಾರೆ. ಅಡವಿ ದೇವಿಯ ಜನರಿಗೂ ಹಾಗೂ ನಾಡ ಅಧಿಕಾರಿಗಳ ನಡುವಿನ ಹೋರಾಟವನ್ನು ಟ್ರೈಲರ್​ನಲ್ಲಿ ಅದ್ಭುತವಾಗಿ ತೋರಿಸಲಾಗಿದೆ.

ರಿಷಬ್​​ ಶೆಟ್ಟಿ ಸ್ವತಃ ಕಥೆ ಬರೆದು, ನಿರ್ದೇಶನದ ಜತೆಗೆ ಲೀಡ್​ ರೋಲ್​​ನಲ್ಲಿ ಕಾಣಿಸಿಕೊಳ್ತಿದ್ದಾರೆ. ಕಂಬಳ, ಭೂತಕೋಲ, ಕರಾವಳಿಯ ಆಚಾರ, ವಿಚಾರ, ಕಾಡಿನ ಸಂಸ್ಕೃತಿಯ ನಡುವಿನ ರೋಚಕ ಕಥೆಯ ಸಿನಿಮಾ ಕಾಂತಾರ. ಸದ್ಯ ರಿಲೀಸ್​ ಆಗಿರೋ ಟ್ರೈಲರ್​​​ ಮೇಕಿಂಗ್​​ಗೆ ಎಲ್ರೂ ಫಿದಾ ಆಗಿದ್ದು, ಪೊಲೀಸ್​ ಅಧಿಕಾರಿ ಕಿಶೋರ್​​​​ ಹಾಗೂ ರಿಷಬ್​​ ನಡುವಿನ ಕದನ ಎಲ್ಲರಿಗೂ ಕುತೂಹಲ ಕೆರಳಿಸಿದೆ. ಖಾಕಿ ಖದರ್​​ನಲ್ಲಿ ಕಿಶೋರ್​ ಅಬ್ಬರಿಸಿದ್ರೆ, ರಿಷಬ್​ ಕಾಡುಜನರ ಉಳಿವಿಗಾಗಿ ರೊಚ್ಚಿಗೆದ್ದು ಹೋರಾಡುತ್ತಾರೆ.

  • ​​​ಸಿಡಿಗುಂಡಿನ ಸುರಿಮಳೆಯ ಜತೆ ಪ್ರೇಮಕಥೆಯ ಹೂಮಳೆ
  • ನಟ ಕಿಶೋರ್​ ಟಫ್​​ ರೂಲ್​ಗೆ ರಿಷಬ್​ ಶೆಟ್ಟಿ​ ಕೆಂಡಾಮಂಡಲ

ಕರಾವಳಿಯ ಸಂಸ್ಕೃತಿಯನ್ನು ಉಳಿಸೋಕೆ ರಿಷಬ್ ಶೆಟ್ಟಿ​​ ಹರಸಾಹಸ ಪಡ್ತಾರೆ. ಇತ್ತ ಫಾರೆಸ್ಟ್​ ಅಧಿಕಾರಿಯಾಗಿ ಕಾಡನ್ನು ಉಳಿಸೋ ಪಾತ್ರದಲ್ಲಿ ಕಿಶೋರ್​ ಕಿತ್ತಾಟ ಜೋರಾಗಿದೆ. ಇವರಿಬ್ರ ನಡುವಿನ ಸಂಘರ್ಷ ಹೇಗಿರಲಿದೆ ಅನ್ನೋ ಸುಳಿವು ನೀಡಿದೆ ಕಾಂತಾರ ಟ್ರೈಲರ್​. ಜತೆಗೆ ಭೂತಕೋಲ ಗೆಟಪ್​ನಲ್ಲಿ ರಿಷಬ್​​ ನೋಡುಗರಿಗೆ ಅಚ್ಚರಿ ಮೂಡಿಸಿದ್ದಾರೆ. ಅಂತೂ ಸಿನಿಮಾ ಪೂರ್ತಿ ಪ್ರೇಕ್ಷಕರಿಗೆ ರೋಮಾಂಚನಗೊಳಿಸುವ ಅನೇಕ ದೃಶ್ಯಗಳಿರೋದು ಪಕ್ಕಾ ಆಗಿದೆ.

ಇದ್ರ ಜತೆಯಲ್ಲಿ ಸಪ್ತಮಿ ಗೌಡ, ರಿಷಬ್​ ಶೆಟ್ಟಿ ಪ್ರೇಮ ಕಥೆಯೂ ಚಿತ್ರದಲ್ಲಿ ಹೈಲೈಟ್​ ಆಗಿದೆ. ವರ್ಸಟೈಲ್​ ಆ್ಯಕ್ಟರ್​ ಅಚ್ಯುತ್​​​ಕುಮಾರ್​​​​ ತಾರಾಗಣದಲ್ಲಿ ಸಿನಿಮಾ ಇನ್ನಷ್ಟು ನಿರೀಕ್ಷೆ ಮೂಡಿಸಿದೆ. ಟೆಕ್ನಿಕಲ್ಲಿ ಎಲ್ಲರ ಗಮನ ಸೆಳೆದಿರುವ ಕಾಂತಾರ ಚಿತ್ರದ ಟ್ರೈಲರ್​​ ಚಿತ್ರರಸಿಕರ ಹೃದಯ ಗೆದ್ದಿದೆ. ಇನ್ನೂ ಅಜನೀಶ್​ ಲೋಕನಾಥ್​ ಸಂಗೀತದಲ್ಲಿ ಮೋಡಿ ಮಾಡ್ತಿರೋ ಸಿಂಗಾರ ಸಿರಿಯೇ ಹಾಡು ಕರುನಾಡಿನ ಭವ್ಯ ಪರಂಪರೆಯನ್ನು ಜಾನಪದ ಹಿನ್ನೆಲೆಯಲ್ಲಿ ಸೊಗಸಾಗಿ ತೋರಿಸುವ ಮೂಲಕ ರಿಷಬ್​ ಗೆದ್ದಿದ್ದಾರೆ. ಈಗಾಗ್ಲೇ ಈ ಹಾಡು ಯ್ಯುಟ್ಯೂಬ್​ನಲ್ಲಿ ಸದ್ದು ಮಾಡ್ತಿದೆ.

ವಿಜಯ್​ ಕಿರಗಂದೂರ್​ ಅವ್ರ ನಿರ್ಮಾಣದಲ್ಲಿ ಸಿನಿಮಾ ರಿಚ್​ ಆಗಿ ಮೂಡಿ ಬಂದಿದ್ದು, ಸಿನಿಮಾ ಸೆ. 30ಕ್ಕೆ ಬೆಳ್ಳಿ ತೆರೆಯ ಮೇಲೆ ರಾರಾಜಿಸಲಿದೆ. ಅರವಿಂದ್​ ಎಸ್​ ಕಶ್ಯಪ್​ ಛಾಯಾಗ್ರಹವಿದ್ದು, ಟ್ರೈಲರ್​​ನಲ್ಲಿ ಪ್ರತಿ ದೃಶ್ಯಗಳು ಮನಮೋಹಕವಾಗಿ ಮೂಡಿ ಬಂದಿವೆ. ಪರಿಸರ ಪ್ರೇಮಿಗಳಿಗೆ, ಕರಾವಳಿ ಸಂಸ್ಕೃತಿಯನ್ನು ಪ್ರೀತಿಸುವವರಿಗೆ ಈ ಸಿನಿಮಾ ಡಬಲ್​​ ಮನರಂಜನೆ ನೀಡಲಿದೆ. ಹಿರಿಯ ಕಲಾವಿದರಿಂದ ಪ್ರಶಂಸೆಗೆ ಪಾತ್ರವಾಗಿರುವ ಕಾಂತಾರ ಚಿತ್ರದ ಟ್ರೈಲರ್​ ಸಿನಿಮಾ ಮೇಲಿನ ಕ್ಯೂರಿಯಾಸಿಟಿಯನ್ನು ದುಪ್ಪಟ್ಟು ಮಾಡಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES