ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಬಸವಣ್ಣರ ವಚನದ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕದ ಡೊಂಕ ನೀವೇಕೆ ತಿದ್ದುವಿರೆಂದು ಬಸವಣ್ಣ ಹೇಳಿದ್ರು. ಮೊದಲು ನಿಮ್ಮ ಮನೆ ರಿಪೇರಿ ಮಾಡಿಕೊಳ್ಳಿ ಅಂದಿದ್ರು. ಉಳಿದದ್ದು ಆಮೇಲೆ ಮಾತನಾಡೋಣ ಎಂದು ಕುಟುಕಿದ್ದಾರೆ.
ಬಸವಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡುವಾಗ ಮಾಧ್ಯಮದವರು ಈಗನ ಯಾವುದೋ ಬೆಳವಣಿಗೆ ಬಗ್ಗೆ ಕೇಳಿದರು. ಅದಕ್ಕೆ ನಾನು, ಲೋಕದ ಡೊಂಕು ನೀವೇಕೆ ತಿದ್ದುವಿರಿ? ಮೊದಲು ನಿಮ್ಮ ಮನವ ಸಂತೈಸಿ. ಮೊದಲು ನಿಮ್ಮ ಮನೆಯನ್ನ ರಿಪೇರಿ ಮಾಡಿಕೊಳ್ಳಿ ಎಂದು ಹೇಳಿದೆ. ಆನೆಯ ಮೇಲೆ ಹೋಗುವವರನ್ನ ನಾಯಿ ಕಚ್ಚಿತೆ..? ಹಾಗೆ ಮಾತಾಡುವವರು ಏನೋ ಮಾತಾಡ್ತಾರೆ, ನಾವು ನಮ್ಮ ಕೆಲಸ ಮಾಡುತ್ತಿರಬೇಕು ಎಂದು ಹೇಳುವ ಮೂಲಕ ಪೆನ್ಡ್ರೈವ್ ಪ್ರಕರಣ ಪ್ರಸ್ತಾಪಿಸಿದ್ದಾರೆ.
ನಾಡು ನಡೆಯುತ್ತಿರೋದೇ ಬಸವ ತತ್ವದ ಮೇಲೆ. ಮೊದಲ ಸಂಸತ್ತನ ಜಾರಿಗೆ ತಂದವರು ಬಸವಣ್ಣನವರು. ಪ್ರತಿಯೊಂದು ಕಾರ್ಯಕ್ರಮವೂ ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದಲ್ಲಿ ಸರ್ಕಾರ ನಡೆಯುತ್ತಿದೆ. ಅಕ್ಷರ ದಾಸೋಹ, ಅನ್ನ ದಾಸೋಹದಂತಹ ನ್ಯಾಯಬದ್ದ ಕಾರ್ಯಕ್ರಮಗಳು ಸರ್ಕಾರದಲ್ಲಿ ನಡೆಯುತ್ತಿವೆ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಪೋಟೋ ಇಡುವಂತೆ ಆದೇಶ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಎಂದೂ ಘೋಷಣೆ ಮಾಡಿದ್ದೇವೆ ಎಂದು ಹೇಳಿದ್ದಾರೆ.