ನೆಲಮಂಗಲ : ಬಿರುಗಾಳಿ ರಭಸಕ್ಕೆ ಕಬ್ಬಿಣದ ಗೇಟ್ ಮುರಿದು ಬಿದ್ದು ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ನೆಲಮಂಗಲ ತಾಲೂಕಿನ ವಾಜರಹಳ್ಳಿಯಲ್ಲಿ ನಡೆದಿದೆ.
ಯಲ್ಲಮ್ಮ (7) ಮೃತ ಬಾಲಕಿ. ನಿನ್ನೆ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಮನೆಯ ಕಬ್ಬಿಣದ ಗೇಟ್ ಕಟ್ ಆಗಿ ಈ ಘಟನೆ ಸಂಭವಿಸಿದೆ.
ಮೃತ ಯಲ್ಲಮ್ಮ ರಾಯಚೂರು ಜಿಲ್ಲೆಯ ದೇವದುರ್ಗದ ಮುಕ್ಕಣ್ಣ ಹಾಗೂ ಬಾಲಮ್ಮ ದಂಪತಿಯ ಮಗಳು ಎಂದು ತಿಳಿದುಬಂದಿದೆ. ಇವರು ಗಾರೆ ಕೆಲಸ ಮಾಡಿ ಜೀವನ ನಡೆಸುತಿದ್ದರು. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ನಿನ್ನೆ ಸಂಜೆ ಮನೆಯ ಅಂಗಳದಲ್ಲಿದ್ದ ಗೇಟ್ ಮೇಲೆ ಹತ್ತಿ ಬಾಲಕಿ ಯಲ್ಲಮ್ಮ ಆಟವಾಡುತ್ತಿದ್ದಳು. ಈ ವೇಳೆ ದಿಢೀರನೆ ಗೇಟ್ ಮುರಿದಿದ್ದು, ಬಾಲಕಿ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ಸಂಬಂಧ ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.