ಮಂಗಳೂರು : ಕಾಂಗ್ರೆಸ್ ನವರೇ, ನಿಮ್ಮಲ್ಲಿ ರಾಷ್ಟ್ರ ಭಕ್ತರು ಇದ್ದಾರೆ ಅಂತ ನಂಬಿದ್ದೆ. ಆದರೆ, ಕರ್ನಾಟಕದ ಆತ್ಮ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಮೊಳಗಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಉಡುಪಿ-ಚಿಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದರು.
ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ ಪೂರ್ವ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಭಾರತದ ಭವಿಷ್ಯವನ್ನ ಬರೆಯುವ ಚುನಾವಣೆ ಎಂದು ಅಭಿಪ್ರಾಯಪಟ್ಟರು.
ವಿಧಾನ ಸೌಧದಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಪ್ರಮಾಣವಚನ ಸ್ವೀಕರಿಸುವಾಗ ಪಾಕಿಸ್ತಾನಕ್ಕೆ ಜೈ ಎಂದವರಿಗೆ ಮತ ನೀಡ್ತೀರಾ? ರಾಮನ ಹೆಸರಿನ ಕೆಫೆ ಎಂಬ ಕಾರಣಕ್ಕೆ ಬ್ಲಾಸ್ಟ್ ಮಾಡಿದವರ ಬಗ್ಗೆ ಮೃದು ಧೋರಣೆ ತೋರಿದವರಿಗೆ ಮತ ನೀಡ್ತೀರಾ? ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರನ್ನ ಅಮಾಯಕರು ಅಂದವರಿಗೆ ವೋಟ್ ಕೊಡ್ತೀರಾ? ಎಂದು ಮತದಾರರಿಗೆ ಪ್ರಶ್ನೆ ಮಾಡಿದರು.
ಇಡೀ ಭಾರತಕ್ಕೆ ಕಟೀಲ್ ಆದರ್ಶ ವ್ಯಕ್ತಿ
ಅತ್ಯಂತ ಭಾವುಕತೆಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಧನ್ಯವಾದ ಸಮರ್ಪಿಸುತ್ತೇನೆ. ಬಿಜೆಪಿ ಟಿಕೆಟ್ ಕೈ ತಪ್ಪಿದ ಸಂದರ್ಭದಲ್ಲೂ ಧೃತಿಗೆಡದೆ ಪಕ್ಷದ ತತ್ವ ಸಿದ್ಧಾಂತವನ್ನ ಪಾಲಿಸಿದ್ದಾರೆ. ನೂತನ ಅಭ್ಯರ್ಥಿ ಬ್ರಿಜೇಶ್ ಚೌಟರಿಗೆ ಬೆಂಬಲ ನೀಡಿದ ರೀತಿ ಶ್ಲಾಘನೀಯ. ಇಡೀ ಭಾರತಕ್ಕೆ ನಳಿನ್ ಕುಮಾರ್ ಕಟೀಲ್ ಆದರ್ಶ ವ್ಯಕ್ತಿ ಎಂದು ಕೋಟ ಶ್ರೀನಿವಾಸ ಪೂಜಾರಿ ಕೊಂಡಾಡಿದರು.