ಮಂಡ್ಯ : ಲೋಕಸಭಾ ಚುನಾವಣೆ ಬಳಿಕ ಡಿಸೆಂಬರ್ ಒಳಗೆ ಕಾಂಗ್ರೆಸ್ ಸರ್ಕಾರ ಪತನವಾಗಲಿ ಎಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಶಾಸಕ ಗಣಿಗ ರವಿಕುಮಾರ್ ತಿರುಗೇಟು ನೀಡಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮ ಸರ್ಕಾರ ಬಂಡೆ ತರ ಇದೆ. ಅಲ್ಲಾಡಿಸಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಧರ್ಮರಾಯನ ತರ ಸಿದ್ದರಾಮಯ್ಯ, ಶ್ರೀಕೃಷ್ಣನ ತರ ಡಿ.ಕೆ. ಶಿವಕುಮಾರ್ ಇದ್ದಾರೆ. ಭ್ರಮೆಯಲ್ಲಿ ಬದುಕುವವರಿಗೆ ನಾವು ಏನು ಹೇಳುವುದಕ್ಕೆ ಆಗಲ್ಲ. ನಮ್ಮದು 139 ಜನ ಶಾಸಕರ ಬೆಂಬಲವಿರುವ ಸುಭದ್ರವಾಗಿರುವ ಸರ್ಕಾರ. ಬಂಡೆ ತರ ಇದೆ, ಅಲ್ಲಾಡಿಸಿಸಲು ಯಾರಿಂದಲೂ ಆಗಲ್ಲ ಎಂದು ಕುಟುಕಿದರು.
ನೀವಿಬ್ಬರೂ ಮಂಡ್ಯದಲ್ಲಿ ಏನು ಮಾಡಕ್ಕಾಗಲ್ಲ
5 ವರ್ಷ ನಮ್ಮ ಕಾಂಗ್ರೆಸ್ ಸರ್ಕಾರ ಇರುತ್ತದೆ. ಗ್ಯಾರಂಟಿ ಯೋಜನೆ ಮೂಲಕ 53 ಸಾವಿರ ಕೋಟಿಯನ್ನು ಜನರಿಗೆ ಕೊಡ್ತಿದ್ದೇವೆ. ಜೊತೆಗೆ ಅಭಿವೃದ್ಧಿ ಕೆಲಸಗಳನ್ನು ಮಾಡ್ತಿದ್ದೇವೆ. ಜನ ಪರ ಇರುವ ಸರ್ಕಾರ. ನೀವಿಬ್ಬರೂ (ಕುಮಾರಸ್ವಾಮಿ ಹಾಗೂ ವಿಜಯೇಂದ್ರ) ಬಂದು ಮಂಡ್ಯದಲ್ಲಿ ಏನು ಮಾಡಕ್ಕಾಗಲ್ಲ ಎಂದು ಚಾಟಿ ಬೀಸಿದರು.
ಎಲ್ಲರಿಗೂ ಸಿದ್ದರಾಮಯ್ಯ ಊಟ ಹಾಕ್ತಿದ್ದಾರೆ
ಧರ್ಮಯುದ್ದದಲ್ಲಿ ಯಾವತ್ತು ಧರ್ಮವೇ ಗೆದ್ದಿದೆ. ಧರ್ಮ ಕಾಂಗ್ರೆಸ್ ಪರ ಇದೆ, ಧರ್ಮವಾಗಿ ಜನರ ಸೇವೆ ಮಾಡ್ತಿದ್ದೇವೆ. ಧರ್ಮ ಉಳಿಸುತ್ತಿದ್ದೇವೆ, ಧರ್ಮಯುದ್ದದಲ್ಲಿ ನಾವೇ ಗೆಲ್ಲೋದು. ಎಲ್ಲರಿಗೂ ನಮ್ಮ ಸಿಎಂ ಸಿದ್ದರಾಮಯ್ಯ ಊಟ ಹಾಕ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಧರ್ಮ ರಾಜ್ಯ ಸೃಷ್ಟಿಯಾಗಿದೆ ಎಂದು ಶಾಸಕ ಗಣಿಗ ರವಿಕುಮಾರ್ ಹೇಳಿದರು.