ಕಲಬುರಗಿ : ನೀನೇನು ಪ್ರಧಾನ ಮಂತ್ರಿಯೋ? ಅಥವಾ ಸ್ಟೇಷನ್ ಮಾಸ್ಟರೋ? ನಾನು ಹೆದರುವವನಲ್ಲ. ಹೇಳಿದ ಮಾತಿಗೇ ಬದ್ದನಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮಗೆ ವೋಟು ಕೊಟ್ಟಿದ್ದು ಆಡಳಿತ ಮಾಡೋದಕ್ಕೆ, ಅದನ್ನ ಬಿಟ್ಟು ಹೆಚ್ಚಿಗೆ ಯಾಕೆ ಹೇಳಬೇಕು. ನಾವು ಏನು ತಿನ್ನಬೇಕು? ತಿನ್ನಬಾರದು ಅಂತ ಯಾಕೆ ಹೇಳ್ತಿಯಪ್ಪ? ಇವರ ಪ್ರಣಾಳಿಕೆ ನೋಡಿದ್ರೆ ಮೇನೂ ತರಹ ಇದೆ ಎಂದು ಕುಟುಕಿದರು.
ಮಣಿಪುರದಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ವಿಚಾರವಾಗಿ ಮಾತನಾಡಿ, ಮಣಿಪುರಕ್ಕೆ ಯಾಕೆ ಹೋಗಿಲ? ಸ್ಟೇಷನ್ಗೆ ಹೋಗಿ ಹಸಿರು ಝಂಡಾ ಹಾರಿಸೋದು. ನೀನ್ ಏನ್ ಪ್ರಧಾನ ಮಂತ್ರಿಯೋ? ಸ್ಟೇಷನ್ ಮಾಸ್ಟರೋ? ಬರೀ ಹೆಣ, ಧರ್ಮದ ರಾಜಕೀಯ ಮಾಡೋದು. ನಾನು ಪ್ರಜೆ, ವಿರೋಧ ಪಕ್ಷದವನಲ್ಲ, ನಾನ್ ಏನೇ ಪ್ರಶ್ನೆ ಕೇಳಿದ್ರು ಉತ್ತರ ಕೊಡಬೇಕು. ಪ್ರಜೆ ಯಾವಾಗಲೂ ಆಳುತ್ತಿರುವ ಪಕ್ಷಕ್ಕೆ ಪ್ರಶ್ನೆ ಮಾಡೋದು. ಹೆಣ್ಣು ಮಕ್ಕಳ ಮೇಲೆ ಇಷ್ಟು ವಿಕೃತ ಕಾಮ ಯಾಕೆ ಬರುತ್ತಿದೆ ಎಂದು ಕಿಡಿಕಾರಿದ್ದಾರೆ.
ಇಂಥ ವಿಕೃತ ಮನೋಭಾವ ಯಾಕೆ ಬೆಳೆಯುತ್ತಿದೆ ?
ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆಯೇ? ಎಂಬ ಪ್ರಶ್ನೆಗೆ, ಇಂತಹ ಘಟನೆಗಳಲ್ಲಿ ಯಾಕೆ ರಾಜಕೀಯ ಮಾಡಬೇಕು? ಇಂತಹ ವಿಕೃತ ಮನೋಭಾವ ಯಾಕೆ ಬೆಳೆಯುತ್ತಿದೆ ? ನಾಳೆ ನಮ್ಮ ಮನೆಯ ಹೆಣ್ಣು ಮಕ್ಕಳಿಗೂ ಈ ರೀತಿ ಆಗಬಹುದು. ಹೀಗಾಗಿ, ನಾವು ಎಚ್ಚೆತ್ತುಕೊಳ್ಳಬೇಕು ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.