ಕೊಪ್ಪಳ : ಕಾಂಗ್ರೆಸ್ ಪಕ್ಷ ಅಂದ್ರೆ ಸಂಸ್ಕೃತಿ, ಸಂಸ್ಕಾರ ಇಲ್ಲದ ಪಕ್ಷ ಎಂದು ಕಾಂಗ್ರೆಸ್ ವಿರುದ್ಧ ಶಾಸಕ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಮಾತನಾಡಿದ ಅವರು, ಮಂಗಳ ಸೂತ್ರ ಕಿತ್ತುಕೊಂಡವರು ಯಾರು? ಎಂಬ ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಬಿ.ಕೆ. ಹರಿಪ್ರಸಾದ ಚಲಾವಣೆಯಲ್ಲಿ ಇಲ್ಲದ ನಾಣ್ಯ. ಅವರ ಹೇಳಿಕೆ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಸಚಿವ ಶಿವರಾಜ ತಂಗಡಗಿ, ಬಿ.ಕೆ. ಹರಿಪ್ರಸಾದ ಸೇರಿದಂತೆ ಕಾಂಗ್ರೆಸ್ ನಾಯಕರು ಸಂಸ್ಕೃತಿ, ಸಂಸ್ಕಾರ ಇಲ್ಲದವರು. ಶಿವರಾಜ ತಂಗಡಗಿ ಬಗ್ಗೆ ನಾನು ಹೆಚ್ಚಿನ ಮಾತು ಆಡಿದ್ರೆ, ಆನೆ ಇರುವೆ ಬಗ್ಗೆ ಮಾತನಾಡಿದಂತೆ ಆಗುತ್ತದೆ ಎಂದು ಟೀಕಿಸಿದ್ದಾರೆ.
ಸಿಎಂ ಸ್ಥಾನದಿಂದ ಕೆಳಗಿಳಿಸುತ್ತಾರೆ
ಸಿದ್ದರಾಮಯ್ಯ ಅವರು ಸಿಎಂ ಆಗಿರೋದಕ್ಕೆ ಡಿ.ಕೆ. ಶಿವಕುಮಾರ್ ಅವರ ವಿರೋಧ ಇದೆ. ಮಂಡ್ಯದ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿಯವರೇ ಹೇಳಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಂತ. ಅದು ಬಾಯಿತಪ್ಪಿ ಹೇಳಿದ್ದಲ್ಲ, ಮನಸ್ಸಲ್ಲಿ ಇರೋದನ್ನೇ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದ್ರೆ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುತ್ತಾರೆ ಅಂತಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದು CM ಆಗಿರೋದಕ್ಕೆ ಡಿಕೆಶಿ ವಿರೋಧ
ಸಿಎಂ ಸ್ಥಾನದಿಂದ ಕೆಳಗಿಳಿಸೋಕೆ ಇದೇನು ರಾಜ್ಯದ ಚುನಾವಣೆನಾ? ಇದು ಲೋಕಸಭಾ ಚುನಾವಣೆ. ಇದಕ್ಕೂ ಸಿಎಂ ಹುದ್ದೆಗೂ ಸಂಬಂಧವಿಲ್ಲ. ಆದರೂ ಕಡಿಮೆ ಸ್ಥಾನ ಬಂದ್ರೆ ಸಿದ್ದರಾಮಯ್ಯರನ್ನು ಕೆಳಗಿಳಿಸಲಾಗುತ್ತೆ ಅಂತ ಕಾಂಗ್ರೆಸ್ ನವರೇ ಹೇಳುತ್ತಿದ್ದಾರೆ. ಏಕೆಂದರೆ, ಸಿದ್ದರಾಮಯ್ಯ ಅವರು ಸಿಎಂ ಆಗಿರೋದಕ್ಕೆ ಡಿಕೆಶಿ ವಿರೋಧ ಇದೆ ಎಂದು ಚಾಟಿ ಬೀಸಿದ್ದಾರೆ.