ಬೆಂಗಳೂರು : ಶಾಸಕ ಹೆಚ್.ಡಿ. ರೇವಣ್ಣ ಬೇರೆ ಅಲ್ಲ ನಾನು ಬೇರೆ ಅಲ್ಲ. ಈ ರೀತಿಯಾದ ರಾಜಕೀಯ ಷಡ್ಯಂತ್ರವನ್ನು ನಾನು ಖಂಡಿಸುತ್ತೇನೆ ಎಂದು ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕ ಎ. ಮಂಜು ಹೇಳಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣರನ್ನ ಭೇಟಿಯಾದ ಬಳಿಕ ಮಾತನಾಡಿದ ಅವರು, ರೇವಣ್ಣರನ್ನು ಭೇಟಿಯಾಗಿದೆ, ಮಾತನಾಡ್ದೆ. ಅವರು ನಮ್ಮ ಸಹೋದ್ಯೋಗಿ, ನಮ್ಮ ಶಾಸಕರು. ನಮ್ಮ ಜಿಲ್ಲೆ ಮುಖಂಡರು ಅವರು. ಅವರಿಗೆ ಧೈರ್ಯ ತುಂಬಿ ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ರೇವಣ್ಣ ಚೆನ್ನಾಗಿದ್ದಾರೆ, ಆರೋಗ್ಯವಾಗಿದ್ದಾರೆ. ಹುಷಾರಿಲ್ಲ ಅಂದ್ರು, ವೈದ್ಯರಿದ್ದಾರೆ. ಕಾನೂನು ರೇವಣ್ಣ ಪರ ಆಗುತ್ತದೆ ಎನ್ನುವ ನಂಬಿಕೆ ಇದೆ. ಬಹುಶಃ ಈ ರೀತಿಯಾದ ದ್ವೇಷದ ರಾಜಕಾರಣ ಯಾರಿಗೂ ಆಗಬಾರದು. ಈ ರೀತಿಯಾದ ರಾಜಕೀಯ ಘಟನೆ ಖಂಡಿಸುತ್ತೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ರೇವಣ್ಣಗೆ ಸೋಮವಾರ ಜಾಮೀನು ಸಿಗುತ್ತದೆ
ರೇವಣ್ಣರ ಜಾಮೀನು ಅರ್ಜಿ ವಿಚಾರಣೆ ಕೂಡ ಮುಂದಕ್ಕೆ ಹೋಗಿದೆ. ಸೋಮವಾರ ಜಾಮೀನು (ಬೇಲ್) ಆಗುತ್ತದೆ ಎನ್ನುವ ನಂಬಿಕೆ ಇದೆ. ರಾಜಕೀಯ ಪ್ರೇರಿತ ಅಂದ್ರೆ, ಒಬ್ಬ ಲೀಡರ್ನ ಡಿಸ್ಟರ್ಬ್ ಮಾಡಿದ್ರೆ ಪಾರ್ಟಿಗೆ ತೊಂದರೆ ಆಗುತ್ತೆ ಅಂತ. ರೇವಣ್ಣ ಮೇಲೆ ಈ ರೀತಿ ಆಪಾದನೆ ಮಾಡಿ ಕೇಸ್ ಆಗಿರುವುದು ತಪ್ಪು ಎಂದು ಹೇಳಿದ್ದಾರೆ.
ನಮ್ಮ ದೇಶದಲ್ಲಿ ಈ ರೀತಿ ಘಟನೆ ಆಗಬಾರದು
ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕೆಲವು ಮಹಿಳೆಯರ ಪತ್ರ ಬರೆದಿರುವ ಬಗ್ಗೆ ಮಾತನಾಡಿ, ದೇವರು ಇದ್ದಾನೆ. ಸತ್ಯಕ್ಕೆ ಜಯ ಸಿಗುತ್ತದೆ. ಯಾರು ಕಳ್ಳರು, ತಪ್ಪು ಮಾಡ್ತಿದ್ದಾರೆ. ನಮ್ಮ ದೇಶದಲ್ಲಿ ಈ ರೀತಿ ಘಟನೆ ಆಗಬಾರದು. ಈ ರೀತಿ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಜೆಡಿಎಸ್ ಶಾಸಕ ಎ. ಮಂಜು ಬೇಸರಿಸಿದ್ದಾರೆ.