ಬೆಂಗಳೂರು : ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣರಿಗೆ ಇಂದು ನ್ಯಾಯಾಲಯ ಮತ್ತೆ ಆಘಾತ ನೀಡಿದೆ.
ಪ್ರಕರಣ ಸಂಬಂದಿಸಿದಂತೆ ಜಾಮೀನು ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯವು, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.
ಸೋಮವಾರ ಬೆಳಗ್ಗೆ 11.30ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ಮೇ 14ರವರೆಗೆ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದು, ಮೇ 10 (ನಾಳೆ) ಬಸವ ಜಯಂತಿ ಹಿನ್ನಲೆ ಸರ್ಕಾರಿ ರಜೆ ಇದೆ. ನಾಡಿದ್ದು 2ನೇ ಶನಿವಾರ ಇದೆ. ಆಮೇಲೆ ಭಾನುವಾರ ಇದೆ. ಹೀಗಾಗಿ, ಸೋಮವಾರದವರೆಗೆ ರೇವಣ್ಣಗೆ ಜೈಲೇ ಗತಿಯಾಗಿದೆ.
ರೇವಣ್ಣ ಪರ ವಕೀಲರ ವಾದವೇನು?
364 ಎ ಪ್ರಕರಣ ಹಾಕಿದ್ದನ್ನು ಉಲ್ಲೇಖಿಸಿ ಹೆಚ್.ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿದರು. ಇಲ್ಲಿ ಸಂತ್ರಸ್ತೆ ಅಪ್ರಾಪ್ತೆಯೂ ಅಲ್ಲ, ಮೂಗಿಯೂ ಅಲ್ಲ. ಆಕೆ ಮೇಜರ್ ಇದ್ದಾರೆ ಎಂದು ದೂರುದಾರನ ದೂರಿನ ಪ್ರತಿ ಓದಿದ್ದಾರೆ. ಸುಳ್ಳು ಹೇಳಿ ತನ್ನ ತಾಯಿ ಕರೆದುಕೊಂಡು ಹೋಗಿದ್ದಾರೆಂದು ದೂರು ದಾಖಲಾಗಿದೆ. ಯಾರು ಮಗನ ಹತ್ತಿರ ಸುಳ್ಳು ಹೇಳಿ ಕರೆದೊಯ್ಯುತ್ತಾರೆ? ಆಕೆ ಮೇಜರ್ ಇದ್ದಾರೆ, ಮೈನರ್ ಅಲ್ಲ. ಹಾಗಾದ್ರೆ, ಹೇಳಿರುವ ಆ ಸುಳ್ಳು ಯಾವುದು ಎಂದು ಹೇಳಿದ್ದಾರೆ.
ಸಿಎಂ ಹೇಳಿದ್ರೆ ಅವರನ್ನು ಬಂಧಿಸಲು ಸಾಧ್ಯವೇ?
ಯಾರೋ ಬಂದು ಕರೆದುಕೊಂಡು ಹೋದ್ರೆ ಹೇಗೆ ಸುಳ್ಳಾಗುತ್ತೆ? ರೇವಣ್ಣ ಸಾಹೇಬರು ಕರೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಬೇಕಿತ್ತು. ಈ ಕೇಸ್ ಸಂಪೂರ್ಣ ರಾಜಕೀಯ ಹಾಗೂ ಪ್ರಚಾರದ್ದಾಗಿದೆ. ಈ ಪ್ರಕರಣದಲ್ಲಿ ಒತ್ತಡವೂ ಇಲ್ಲ, ಒತ್ತಾಯವೂ ಇಲ್ಲ. ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿಲ್ಲ. ಕಿಡ್ನ್ಯಾಪ್ ಪ್ರಕರಣದಲ್ಲಿ ಒತ್ತಡ, ಒತ್ತಾಯ ಪ್ರಮುಖ ಅಂಶ. ಈ ಪ್ರಕರಣದಲ್ಲಿ ಕಿಡ್ನ್ಯಾಪ್ಗೆ ಬೇಕಾದ ಮೂಲ ಅಂಶಗಳೇ ಇಲ್ಲ. ಇಲ್ಲಿ ಯಾರು? ಏನು ಡಿಮ್ಯಾಂಡ್ ಮಾಡಿದ್ದಾರೆ. ಯಾವುದಾದರೂ ಡಿಮ್ಯಾಂಡ್ ಇರಲೇಬೇಕಲ್ವಾ? ಸಿಎಂ ಹೇಳಿದ್ದಾರೆಂದು ಕರೆದೊಯ್ದರೆ ಸಿಎಂ ಬಂಧಿಸಲು ಸಾಧ್ಯವೇ? ಎಂದು ವಕೀಲ ಸಿ.ವಿ. ನಾಗೇಶ್ ವಾದ ಮಾಡಿದ್ದಾರೆ.