ಬೆಂಗಳೂರು : ಸಾವು ಯಾವಾಗ ಬರುತ್ತೆ? ಯಾವ ರೂಪದಲ್ಲಿ ಬರುತ್ತೆ ಅಂತ ಹೇಳಲು ಸಾಧ್ಯವಿಲ್ಲ. ಮನುಷ್ಯನಿಗೆ ಯಾವುದೇ ಸಮಯದಲ್ಲಿ ಸಾವು ಬರಬಹುದು. ಇದಕ್ಕೆ ಈ ಘಟನೆಯೇ ತಾಜಾ ಸಾಕ್ಷಿ!
ಮೊಬೈಲ್ನಲ್ಲಿ ಮಾತನಾಡುತ್ತಾ ಮನೆ ಅಂಗಳದಲ್ಲಿ ಬೆಳೆದಿದ್ದ ಕಣಗಿಲೆ ಹೂ ಒಂದನ್ನು ಕಿತ್ತು ತಿಂದ ಪರಿಣಾಮ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ.
ಕೇರಳದ ಕೇರಳದ ಹರಿಪತ್ನಲ್ಲಿ ಈ ಘಟನೆ ನಡೆದಿದೆ. ಅರಿವಿಲ್ಲದೇ ಕಣಗಿಲೆ ಹೂವನ್ನು ಕಿತ್ತು ತಿಂದ ನರ್ಸ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸೂರ್ಯ ಸುರೇಂದ್ರನ್ (24) ಸಾವನ್ನಪ್ಪಿರುವ ಯುವತಿ.
ಮೃತ ಯುವತಿ ವೃತ್ತಿಯಲ್ಲಿ ನರ್ಸ್ ಆಗಿರುವುದರಿಂದ ಹೊಸ ಕೆಲಸದತ್ತ ಯುಕೆಗೆ ತೆರಳಲು ನೆಡುಂಬಚೇರಿ ವಿಮಾನ ನಿಲ್ದಾಣಕ್ಕೆ ಹೊರಟ್ಟಿದ್ದಳು. ಈ ವೇಳೆ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಸ್ಪತ್ರೆಗೆ ಈಕೆಯನ್ನು ಕರೆದೊಯ್ಯಲಾಗಿದೆ. ಹೃದಯಾಘಾತದಿಂದ ಯುವತಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಮರಣೋತ್ತರ ಪರೀಕ್ಷೆ ನಂತರ ಹೂವು ಹಾಗೂ ಎಲೆ ತಿಂದಿದ್ದೆ ವಿಷವಾಗಿತ್ತು (ಸಾವಿಗೆ ಕಾರಣ) ಎಂಬ ಸತ್ಯ ಬೆಳಕಿಗೆ ಬಂದಿದೆ.
ಇದು ಅತ್ಯಂತ ವಿಷಕಾರಿ ಸಸ್ಯ
ಕಣಗಿಲೆ ಹೂ ಅತ್ಯಂತ ವಿಷಕಾರಿ ಸಸ್ಯ. ವಿಶೇಷವಾಗಿ ದೇವರ ಪೂಜೆಗೆ ಹೆಚ್ಚು ಈ ಹೂ ಬಳಸಲಾಗುತ್ತದೆ. ದೇವಸ್ಥಾನ, ಉದ್ಯಾನವನ, ರಸ್ತೆ ಬದಿ, ಕೆರೆ ಕಟ್ಟೆಗಳಲ್ಲಿ ಅಲಂಕಾರಿಕ ಸಸ್ಯವಾಗಿ ಬೆಳೆಸಲಾಗುತ್ತದೆ. ಗ್ರಾಮೀನ ಪ್ರದೇಶದಲ್ಲಿ ಎಲ್ಲಾ ಕಡೆಯೂ ಕಾಣಬಹುದು. ಈ ಹೂವಿಗೆ ಕಸ್ತೂರಿ ಪಟ್ಟಿ, ಕಣಗಿಲೆ ಹಾಗೂ ಕುದುರೆ ವಿಷದ ಗಿಡ ಎಂದೂ ಕರೆಯಲಾಗುತ್ತದೆ.