ವಿಜಯಪುರ : ನನಗೆ ಈಗ 72 ವರ್ಷ, ಕೈ ಕಾಲು ಗಟ್ಟಿ ಇದೆ. ಇನ್ನೊಂದು ಲೋಕಸಭಾ ಚುನಾವಣೆ ಮಾಡಿ ನಿಮ್ಮ ಆಶೀರ್ವಾದ ಪಡೆಯಲು ನಾನು ಬರುವೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮುದ್ದೇಬಿಹಾಳ ಪಟ್ಟಣದಲ್ಲಿ ಹಾಲಿ ಸಂಸದ ಜಿಗಜಿಣಗಿ ಪರವಾಗಿ ಮತಯಾಚನೆ ಮಾಡಿದರು. ಭಾರತ್ ಮಾತಾ ಕಿ ಜೈ, ಜೈ ಶ್ರೀ ರಾಮ ಎಂದು ಭಾಷಣ ಆರಂಭಿಸಿದರು.
ಇಂತಹ ಉರಿ ಬಿಸಿಲಿನಲ್ಲಿ ಮೆರವಣಿಗೆಯಲ್ಲಿ ಜನರು ಪಾಲ್ಗೊಂಡಿದ್ದು ನೋಡಿದರೆ ನಿಮಗೆ ಎಷ್ಟೇ ಅನುದಾನ ಕೊಟ್ಟರೂ ಕಡಿಮೆ. ನಾನು ಅಧಿಕಾರದಲ್ಲಿದ್ದಾಗ ಲಂಬಾಣಿ ತಾಂಡಾ ಗಳ ಅಭಿವೃದ್ಧಿ ಮಾಡಿರುವೆ. ಪರಿಶಿಷ್ಟ ಜಾತಿ ಪಂಗಡದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿರುವೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ ನವರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಸತ್ಯ
ಹಲವಾರು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹಮ್ಮಿಕೊಂಡಿದ್ದಾರೆ. ಇಡೀ ದೇಶದ ಜನರಿಗಾಗಿ ತ್ಯಾಗ ಮಾಡಿದ ಪಕ್ಷ ಭಾರತೀಯ ಜನತಾ ಪಕ್ಷ. ಸೂರ್ಯ ಚಂದ್ರ ಇರುವದು ಎಷ್ಟು ಸತ್ಯವೋ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಸತ್ಯ. ಮತ್ತೊಮ್ಮೆ ರಮೇಶ ಜಿಗಜಿಣಗಿ ಅವರಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮೇ 7ರಂದು ಕಮಲದ ಗುರುತಿಗೆ ಮತ ನೀಡಿ
ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್ ಪಾಟೀಲ ನಡಹಳ್ಳಿ ಮಾತನಾಡಿ, ಯಡಿಯೂರಪ್ಪನವರು ನನಗೆ ರೈತ ಮೋರ್ಚಾ ಅಧ್ಯಕ್ಷರ ಜವಾಬ್ದಾರಿ ಕೊಟ್ಟಿದ್ದಾರೆ. ರಾಜ್ಯದ ಮೂಲೆ ಮೂಲೆಗೂ ಹೋಗಿ ಪಕ್ಷ ಸಂಘಟನೆ ಮಾಡುವೆ. ನೀವು ಮತ ಹಾಕಿದ್ದು ಒಂದೇ ಒಂದು ಮತ ಕಡಿಮೆಯಾದರೆ, ಅದು ಅಭಿವೃದ್ದಿಗೆ ಮಾಡಿದ ಕಡೆಗಣನೆ ಮಾಡಿದಂತಾಗುತ್ತದೆ. ಮೇ 7ರಂದು ಕಮಲದ ಗುರುತಿಗೆ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಹೇಳಿದರು.