ಶಿವಮೊಗ್ಗ : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಇದ್ದಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿರುವ ಅವರು, ಪೆನ್ಡ್ರೈವ್ ಹಂಚಿದವರನ್ನು ಸರ್ಕಾರ ಗಮನಿಸುತ್ತಿಲ್ಲ. ಇಂತಹ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಇದು ನಾಚಿಗೇಡು, ಹೇಸಿಗೆಯ ರಾಜಕೀಯ ಇದು ಎಂದು ಟೀಕಿಸಿದ್ದಾರೆ.
ಈ ಕೃತ್ಯವನ್ನು ನಾನು ಖಂಡಿಸುತ್ತೇನೆ. ಅಪರಾಧ ಮಾಡಿದವರನ್ನು ದಂಡಿಸಬೇಕು. ಈ ಪ್ರಕರಣವನ್ನು ಎಸ್ಐಟಿಗೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಪೆನ್ಡ್ರೈವ್ ವಿತರಣೆ ಮಾಡಿದವರು ಕೂಡ ಅಷ್ಟೇ ದೊಡ್ಡ ಅಪರಾಧಿಗಳು ಎಂದು ಹೇಳಿದ್ದಾರೆ.
ಒಂದು ಕುಟುಂಬ ಮುಗಿಸಲು ತಂತ್ರ
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಎರಡ್ಮೂರು ಪ್ರಕರಣ ಆಗಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ನೋವುಂಟು ಮಾಡಬೇಕು ಎನ್ನುವುದು ಇದರ ಹಿಂದೆ ಇದೆ. ಒಕ್ಕಲಿಗ ನಾಯಕತ್ವದ ಪ್ರಶ್ನೆ ಈ ಪ್ರಕರಣದ ಹಿಂದೆ ಇದೆ. ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ ನಡೆಯುತ್ತಿದೆ. ಈ ಪ್ರಕರಣದ ಹಿಂದೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಇದ್ದಾರೆ ಎಂದು ಆರೋಪಿಸಿದ್ದಾರೆ.
ತನಿಖೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ
ಎಸ್ಐಟಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಸಿಎಂ, ಡಿಸಿಎಂ ಮಾರ್ಗದರ್ಶನದಲ್ಲಿ ಈ ತನಿಖೆ ನಡೆಯುತ್ತಿದೆ. ಕೂಡಲೇ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ ಎಂದು ಆರಗ ಜ್ಞಾನೇಂದ್ರ ದೂರಿದ್ದಾರೆ.