ನವದೆಹಲಿ : ಹಬ್ಬ-ಹರಿದಿನ, ರಂಜಾನ್ ವೇಳೆ ಗಿಫ್ಟ್ ನೀಡುವುದು ನಮ್ಮ ಸಂಪ್ರದಾಯ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರು ಗ್ರಾಮಾಂತರದಲ್ಲಿ ಕುಕ್ಕರ್ ಹಂಚಿಕೆ ವಿಚಾರವಾಗಿ ದೆಹಲಿಯಲ್ಲಿ ಮಾತನಾಡಿದ ಅವರು, ಅವೆಲ್ಲವೂ ಹಳೇ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿದ್ದಾರೆ ಎಂದು ತಿಳಿಸಿದರು.
ಹಿಂದಿನಿಂದಲೂ ನಾವು ನಮ್ಮ ಕ್ಷೇತ್ರದ ಜನರಿಗೆ ಹಬ್ಬ ಹರಿದಿನದ ಸಂದರ್ಭದಲ್ಲಿ ಗಿಫ್ಟ್ ಕೊಟ್ಟಿದ್ದೇವೆ. ನನ್ನ ಮಗಳ ಮದುವೆಯ ಸಂದರ್ಭದಲ್ಲಿ ಎಲ್ಲರಿಗೂ ಸೀರೆಯನ್ನು ಕೊಟ್ಟಿದ್ದೇವೆ. ಕನಕೋತ್ಸವದ ಸಂದರ್ಭದಲ್ಲಿ ಮನೆಗಳಿಗೆ ಉಡುಗೊರೆ ನೀಡಿದ್ದೇವೆ. ಜೊತೆಗೆ, ರಂಜಾನ್ ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಉಡುಗೊರೆಯನ್ನು ನೀಡಿದ್ದೇವೆ. ಇದು ನಮ್ಮ ಸಂಪ್ರದಾಯ ಎಂದು ಹೇಳಿದರು.
HDKಗೆ ಒಳ್ಳೆಯ ಆರೋಗ್ಯ ಕೊಡಲಿ
ಬಿಜೆಪಿ ಹಾಗೂ ಜೆಡಿಎಸ್ ನಡುವೆ ಅಸಮಾಧಾನ ಇತ್ತು. ಅದನ್ನು ಶಮನಗೊಳಿಸಿದ ನಂತರ ನನ್ನ ಮೇಲೆ ಏನಾದರೂ ಮಾತನಾಡಬೇಕಲ್ಲ. ಹಾಗಾಗಿ, ಈ ವಿಚಾರವನ್ನು ಮಾತನಾಡಿದ್ದಾರೆ. ಬಿಜೆಪಿಯವರಿಗೆ ಖುಷಿಪಡಿಸಬೇಕಲ್ಲ, ಹಾಗಾಗಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಅವರಿಗೆ ಖುಷಿಪಡಿಸಲು ನನ್ನನ್ನ ಬೈತಾರೆ ಅಂದ್ರೆ ಒಳ್ಳೆಯದಾಗಲಿ. ಅವರಿಗೆ ಒಳ್ಳೆಯ ಆರೋಗ್ಯ ಕೊಡಲಿ ಎಂದರು.
ನಾನು ನಂಬುವ ದೇವರು ನೋಡಿಕೊಳ್ಳಲಿ
ಡಿ.ಕೆ. ಶಿವಕುಮಾರ್ ನನಗೆ ವಿಷ ಇಟ್ಟಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆ ತರ ಏನಾದರೂ ನಾನು ಮಾಡಿದ್ದರೆ, ನಾನು ನಂಬುವ ದೇವರು ನನ್ನನ್ನು ನೋಡಿಕೊಳ್ಳಲಿ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.