ರಾಮನಗರ : ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ಯಾರು ನನಗೆ ಗೊತ್ತಿಲ್ಲ. ನನಗೆ ದೇವೇಗೌಡರ ಅಳಿಯ ಡಾ. ಮಂಜುನಾಥ್ ಗೊತ್ತು ಎಂದು ಸಂಸದ ಡಿ.ಕೆ. ಸುರೇಶ್ ಕುಟುಕಿದರು.
ರಾಮನಗರ ಜಿಲ್ಲೆಯ ಚನ್ನಪಟ್ಟಣದ ತಿಟ್ಟಮಾರನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಮೈತ್ರಿ ಅಭ್ಯರ್ಥಿ ಆಗಿದ್ದಾರೆ. ಅವರು ಮೊದಲು ಅರ್ಜಿ ಹಾಕಲಿ, ಆಮೇಲೆ ಮಾತನಾಡುತ್ತೇನೆ ಎಂದು ಹೇಳಿದರು.
ನಾನು ಡಾ. ಮಂಜುನಾಥ್ ಅವರ ಸ್ಪರ್ಧೆಯನ್ನು ಸ್ವಾಗತ ಮಾಡುತ್ತೇನೆ. ದೇವೇಗೌಡರ ಕುಟುಂಬದ ವಿರುದ್ಧ ಸ್ಪರ್ಧೆ ನನಗೆ, ಸಹೋದರ ಡಿ.ಕೆ. ಶಿವಕುಮಾರ್ ಅವರಿಗೆ ಹೊಸದೇನಲ್ಲ. ದೇವೇಗೌಡರು, ಕುಮಾರಸ್ವಾಮಿ ಅವರ ಪಕ್ಷ ಸರಿಯಿಲ್ಲ ಎಂದು ಅಳಿಯ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಜನತಾದಳದ ಕಾರ್ಯಕರ್ತರು ಯೋಚನೆ ಮಾಡಬೇಕಿದೆ ಎಂದು ಚಾಟಿ ಬೀಸಿದರು.
ದೇವೇಗೌಡರ ಪಕ್ಷಕ್ಕೆ ಜನಪ್ರಿಯತೇ ಇಲ್ಲ
ಈ ರಾಜ್ಯದಲ್ಲಿ ದೇವೇಗೌಡರ ಪಕ್ಷ, ಅವರಿಗೆ ಜನಪ್ರಿಯತೇ ಇಲ್ಲ ಎಂಬುದನ್ನು ಅವರ ಅಳಿಯ ನಿರ್ಧರಿಸಿದ್ದಾರೆ. ಅದಕ್ಕೆ ಬೇರೆ ಪಕ್ಷವನ್ನ ಮಂಜುನಾಥ್ ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಪಕ್ಷ, ನಾಯಕತ್ವ ಅಸ್ತಿತ್ವದಲ್ಲಿ ಇಲ್ಲ ಎಂದು ಅಳಿಯ ನಿರ್ಧಾರ ಮಾಡಿದ್ದಾರೆ ಎಂದು ಛೇಡಿಸಿದರು.
ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ಗೆ ಬನ್ನಿ
ಜೆಡಿಎಸ್ ಸರಿಯಿಲ್ಲ ಅಂತ ನಾನು ಹೇಳ್ತಿಲ್ಲ, ಅವರ ಅಳಿಯ ಹೇಳ್ತಿರೋದು. ಜೆಡಿಎಸ್ ಕಾರ್ಯಕರ್ತರು ಬನ್ನಿ, ನಿಮ್ಮ ಪರವಾಗಿ ನಾನು ಕೆಲಸ ಮಾಡ್ತೇನೆ. ಜೆಡಿಎಸ್ ಕಾರ್ಯಕರ್ತರಿಗೆ ಮುಕ್ತ ಆಹ್ವಾನ ಕೊಡ್ತಿದ್ದೇನೆ, ಬನ್ನಿ ಕೆಲಸ ಮಾಡೋಣ ಎಂದು ಜೆಡಿಎಸ್ ಕಾರ್ಯಕರ್ತರನ್ನ ಕಾಂಗ್ರೆಸ್ ಪಕ್ಷಕ್ಕೆ ಸಂಸದ ಡಿ.ಕೆ. ಸುರೇರ್ಶ ಆಹ್ವಾನಿಸಿದರು.