ರಾಯಚೂರು: ಇಂದಿನಿಂದ ಮಂತ್ರಾಲಯದಲ್ಲಿ 6 ದಿನಗಳ ಕಾಲ ಶ್ರೀಗುರುವೈಭವೋತ್ಸವ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 11ರಿಂದ ಶ್ರೀ ರಾಘವೇಂದ್ರ ಗುರುವೈಭವೋತ್ಸವ ಕಾರ್ಯಕ್ರಮ ಆರಂಭವಾಗಲಿದ್ದು ಮಾರ್ಚ್ 16ರ ವರೆಗೆ ನಡೆಯಲಿದೆ.
ಇಂದು 403ನೇ ವರ್ಷದ ಶ್ರೀರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತಿದ್ದು, ಮಾ.16 ರಂದು ಬೆಳಗ್ಗೆ 8 ಗಂಟೆಗೆ ಶ್ರೀರಾಘವೇಂದ್ರ ಸ್ವಾಮಿಗಳವರ ವರ್ಧಂತಿ ಉತ್ಸವವನ್ನ ನಡಸಲಾಗುತ್ತದೆ. ಆ ದಿನ ತಿರುಪತಿ ತಿರುಮಲ ದೇವಸ್ಥಾನದಿಂದ ಬಂದ ಶ್ರೀನಿವಾಸ ದೇವರ ಶೇಷವಸ್ತ್ರಗಳು ರಾಯರ ಮೂಲ ಬೃಂದಾವನಕ್ಕೆ ಸಮರ್ಪಣೆ ಮಾಡಲಾಗುತ್ತದೆ.
ಇದನ್ನೂ ಓದಿ: ಬಾಲ್ಯವಿವಾಹಕ್ಕೆ ನಿರಾಕರಣೆ; ಪತ್ನಿ ಕಾಲು ಮುರಿದ ಪತಿ
ಇನ್ನು ಚೆನ್ನೈನ ಶ್ರೀರಾಘವೇಂದ್ರ ಸ್ವಾಮಿ ನಾದಹಾರ ಸೇವಾ ಸಂಸ್ಥೆಯ ಸುಮಾರು 100ಕ್ಕೂ ಹೆಚ್ಚು ಕಲಾವಿದರಿಂದ ನಾದಹಾರ ಸಮರ್ಪಣಾ ಸೇವೆ ಸಹ ನಡೆಯಲಿದ್ದು, ಶ್ರೀಮಠದ ಪ್ರಾಕಾರದಲ್ಲಿ ನಾದಹಾರ ನಡೆಯಲಿದೆ. ಕಳೆದ 19 ವರ್ಷಗಳಿಂದಲೂ ಯಶಸ್ವಿಯಾಗಿ ನಾದಹಾರ ಸೇವೆ ನಡೆಯುತ್ತಿದೆ. ಆರು ದಿನಗಳ ಕಾಲ ನಡೆಯುವ ಶ್ರೀರಾಘವೇಂದ್ರ ಗುರುವೈಭವೋತ್ಸವದ ನಿಮಿತ್ಯ, ಪ್ರತಿದಿನ ಬೆಳಗ್ಗೆ 10 ಗಂಟೆಗೆ ವಿದ್ವಾಂಸರಿಂದ ಜ್ಞಾನ ಯಜ್ಞ ಹೋಮ ನಡೆಸಲಾಗುತ್ತದೆ. ಇನ್ನು ಸಂಜೆ ವಿವಿದ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.