ವಿಜಯಪುರ : ದಲಿತರಿಗೆ ಸಿಎಂ ಆಗುವ ಅವಕಾಶ ದೊರೆಯಲಿ ಎಂದಿರುವ ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿಕೆಯನ್ನು ಸಚಿವ ಎಂ.ಬಿ. ಪಾಟೀಲ್ ಸಮರ್ಥಿಸಿಕೊಂಡರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಸಿಎಂ ಬೇಡಿಕೆ ಪರವಾಗಿ ಬ್ಯಾಟಿಂಗ್ ಮಾಡಿದರು. ದಲಿತ ಸಿಎಂ ಆಗೋದ್ರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.
ದಲಿತ ಸಿಎಂ ಆಗಬೇಕು. ಆದರೆ, ಈಗ ಸಿಎಂ ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯನವರು ಸಿಎಂ ಇದ್ದಾರೆ. ಮುಂದೊಂದು ದಿನದಲ್ಲಿ ದಲಿತರು ಸಿಎಂ ಆಗೋದರಲ್ಲಿ ತಪ್ಪೇನಿದೆ? ದಲಿತರು ಸಿಎಂ ಆಗೋದರಲ್ಲಿ ತಪ್ಪಿನಿದೆ ಹೇಳಿ ಎಂದು ಸುದ್ದಿಗಾರರನ್ನೇ ಪ್ರಶ್ನಿಸಿದ ಅವರು, ನಿಶ್ಚಿತವಾಗಿಯೂ ದಲಿತ ಸಿಎಂ ಆಗಬೇಕು ಅನ್ನೋದು ನನ್ನ ಅಭಿಪ್ರಾಯ ಎಂದು ಹೇಳಿದರು.
ಅವರದ್ದು ಸುಮ್ಮನೆ ಚುನಾವಣೆ ಗಿಮಿಕ್
ಕನ್ನಡ ಕಡ್ಡಾಯ ವಿರೋಧಿಸಿ ಎಂಈಎಸ್ ಕೇಂದ್ರಕ್ಕೆ ಪತ್ರ ವಿಚಾರವಾಗಿ ಮಾತನಾಡಿ, ನೋಡಿ ಎಂಈಎಸ್ನವರದ್ದು ಸುಮ್ಮನೆ ಚುನಾವಣೆ ಗಿಮಿಕ್ ಇರುತ್ತದೆ. ಯಾರು ಕೇಳುತ್ತಾರೆ ಅವರನ್ನ, ಈಗ ಅವರ ಶಕ್ತಿನೂ ಸಹ ಮುಗಿದು ಹೋಗಿದೆ. ಎಂಈಎಸ್ ಶಕ್ತಿ ಏನೂ ಉಳಿದಿಲ್ಲ, ನೀವು ನೋಡಿದ್ರಲ್ಲ ಎಲ್ಲಾ ಮೊನ್ನೆ. ಜತ್ತ ಮುಂತಾದ ಗಡಿಭಾಗದವರು ಕರ್ನಾಟಕದಲ್ಲಿ ಬರ್ತೀವಿ ಅಂತಿದ್ದಾರೆ. ಹೀಗಾಗಿ (ಎಂಈಎಸ್) ಅವರ ಬಗ್ಗೆ ಏನೂ ತಲೆ ಕೆಡಿಸಿಕೊಳ್ಳಲು ಹೋಗಬೇಡಿ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.