ದಾವಣಗೆರೆ : ಬಿಜೆಪಿಗೆ ಮತ ಹಾಕಲು ಜನರು ಕಾಯ್ತಾ ಇದ್ದಾರೆ. ರಾಜ್ಯದ 28 ಕ್ಷೇತ್ರಗಳ ಪೈಕಿ 28 ಕ್ಷೇತ್ರವನ್ನೂ ಗೆಲ್ಲೋದು ನಮ್ಮ ಗುರಿ ಎಂದು ಶಾಸಕ ಭೈರತಿ ಬಸವರಾಜ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಉಚಿತ ಗ್ಯಾರಂಟಿಗಳು ಕೊಚ್ಚಿ ಹೋಗುತ್ತವೆ. ಚುನಾವಣೆ ಬಳಿಕ ಗ್ಯಾರಂಟಿ ನಿಲ್ಲಿಸುವ ಕೆಲಸ ಆಗುತ್ತದೆ. ನಾಲ್ಕು ವರ್ಷ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ. ಮುಂದೆ ರಾಜ್ಯದಲ್ಲಿ ನಮ್ಮದೇ ಸರ್ಕಾರ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಾಸಕ ಶಿವರಾಂ ಹೆಬ್ಬಾರ್, ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಾರೇ ಆಗಲಿ ಅನುಕೂಲ ಸಿಂಧು ಕೆಲಸ ಮಾಡಬಾರದು. ಅವರವರ ಅನುಕೂಲಕ್ಕೆ ತಕ್ಕಂತೆ ಮಾಡುತ್ತಿದ್ದಾರೆ. ನಾನು ಇಬ್ಬರನ್ನೂ ಕರೆದು ಮಾತನಾಡಿದೆ. ಇಲ್ಲಿ ಸರಿಯಿಲ್ಲ ಅಂತಾರೆ ಏನು ಮಾಡೋದು ಎಂದು ಬೇಸರಿಸಿದ್ದಾರೆ.
ನಾನು, ಮುನಿರತ್ನ ಪಕ್ಷ ಬಿಡುವುದಿಲ್ಲ
ನಾನು ನನ್ನ ಸ್ನೇಹಿತ ಮುನಿರತ್ನ ಬಿಜೆಪಿ ತತ್ವ ಸಿದ್ದಾಂತ ಒಪ್ಪಿ ಬಂದವರು. ನಾವು ಪಕ್ಷ ಬಿಡುವ ಕೆಲಸ ಮಾಡಲ್ಲ. ಆಶಾದಾಯಕವಾಗಿ ಕೆಲಸ ಮಾಡುತ್ತೇವೆ. ಬಿಜೆಪಿಯಲ್ಲಿ ಗೌರವ ಕೊಟ್ಟಿದ್ದಾರೆ, ಬೇರೆ ಪಾರ್ಟಿಗೆ ಹೋಗುವ ಅವಶ್ಯಕತೆ, ಭಾವನೆ ಇಲ್ಲ. ಲೋಕಸಭಾ ಚುನಾವಣೆ ಆದ ಮೇಲೆ ಯಾರು ಎಲ್ಲಿ ಹೋಗ್ತಾರೆ ನೋಡೋಣ ಎಂದು ಭೈರತಿ ಬಸವರಾಜ್ ಹೇಳಿದ್ದಾರೆ.