ಶಿವಮೊಗ್ಗ : ಹಿಂದುತ್ವದ ಬಗ್ಗೆ ಮಾತನಾಡಿದ್ದಕ್ಕೆ ಬೇರೆ ಬೇರೆ ದೇಶಗಳಿಂದ ನನಗೆ ಬೆದರಿಕೆ ಕರೆ ಬರುತ್ತಿದೆ. ಫೋನ್ ಮೂಲಕ ಬೆದರಿಕೆ ಹಾಕಬೇಡಿ, ಧೈರ್ಯ ಇದ್ದರೆ ಮುಂದೆ ಬನ್ನಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಸವಾಲ್ ಹಾಕಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬಿ.ಆರ್.ಪಿಯಲ್ಲಿ ರಾಷ್ಟ್ರ ಭಕ್ತರ ಬಳಗದಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಈ ರೀತಿ ಬೆದರಿಕೆಗಳಿಗೆ ನಾನು ಬಗ್ಗುವುದಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಹೋದಲೆಲ್ಲಾ ಕುಟುಂಬ ರಾಜಕಾರಣದ ವಿರುದ್ಧ ಮಾತನಾಡುತ್ತಾರೆ. ಆದರೆ, ರಾಜ್ಯದಲ್ಲಿ ಬಿಜೆಪಿ ಪಕ್ಷ ಅಪ್ಪ ಮಕ್ಕಳ ಹಿಡಿತದಲ್ಲಿದೆ. ಇದರಿಂದ ರಾಜ್ಯದ ಜನ ಕಾರ್ಯಕರ್ತರು ನೋವಿನಲ್ಲಿದ್ದಾರೆ. ಪಕ್ಷವನ್ನು ಒಂದು ಕುಡುಂಬದಿಂದ ಹೊರ ತಂದು ಕಾರ್ಯಕರ್ತರಿಗೆ ನೆಮ್ಮದಿ ತರಲು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲಾ ಭಾಗಗಳಿಗೆ ನಾನು ಭೇಟಿ ನೀಡಿದ್ದೇನೆ. ಹೋದಲೆಲ್ಲಾ ಜನರು ನನ್ನ ಸ್ಪರ್ಧೆಯನ್ನು ಬೆಂಬಲಿಸುತ್ತಿದ್ದಾರೆ. ನಿಮ್ಮನ್ನು ಗೆಲ್ಲಿಸುವುದಾಗಿ ಆಶೀರ್ವಾದ ಮಾಡುತ್ತಿದ್ದಾರೆ. ನೀವು ಸಹ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಸಹಕಾರ ನೀಡಿ ಎಂದು ಮತದಾರರಿಗೆ ರಲ್ಲಿ ಮನವಿ ಮಾಡಿದ್ದಾರೆ.
ನೇಹಾ ಕೊಲೆ ಪ್ರಕರಣ ಸಿಬಿಐಗೆ ವಹಿಸಬೇಕು
ಸಿಐಡಿ ಅಧಿಕಾರಿಗಳು ಮುಖ್ಯಮಂತ್ರಿ ಹೇಳಿದಂತೆ ವರದಿ ನೀಡುತ್ತಾರೆ. ಹೀಗಾಗಿ, ನೇಹಾ ಕೊಲೆ ಪ್ರಕರಣ ಸಿಬಿಐಗೆ ವಹಿಸಬೇಕು. ಹೇಡಿಗಳ ರೀತಿ ಹಿಂದೂ ಯುವಕರನ ಮೇಲೆ ಹಲ್ಲೆ ಮಾಡಿ, ಓಡಿ ಹೋಗುತ್ತಾರೆ. ನಾವೇನು ಪಾಕಿಸ್ಥಾನದಲ್ಲಿದ್ದೇವಾ? ಹೆಣ್ಣಿಗೆ ಗೌರವ ಸಿಗಬೇಕು, ಗೋವಿಗೆ ಪೂಜೆಯಾಗಬೇಕು. ಮಂದಿರಗಳು ಉಳಿಸಬೇಕು, ಹಿಂದುತ್ವ ಬೆಳೆಯಬೇಕು ಎಂಬ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.