ವಿಜಯಪುರ : ನನಗೆ ಮಗ ಬಿ.ವೈ. ರಾಘವೇಂದ್ರ ಆದ್ಯತೆ ಅಲ್ಲ. ನನಗೆ ನೀವು ಮುಖ್ಯ, ನೀವು ಅಗತ್ಯ ಎಂದು ತವರು ಕ್ಷೇತ್ರದಲ್ಲೇ ಸ್ವಪಕ್ಷದ ಶಾಸಕ ಯತ್ನಾಳ್ಗೆ ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ಟಕ್ಕರ್ ಕೊಟ್ಟರು.
ಮುದ್ದೇಬಿಹಾಳ ಪಟ್ಟಣದಲ್ಲಿ ನಡೆ ಪ್ರಚಾರ ಸಭೆಯಲ್ಲಿ ಮಾತನಾಡಿ, ನನ್ನ ಮಗ ಶಿವಮೊಗ್ಗದಲ್ಲಿ ಸ್ಪರ್ಧಿಸಿದ್ದಾನೆ. ಅಲ್ಲಿ ನಾನು ಸಭೆಯಲ್ಲಿ ಇರಬೇಕಾಗಿತ್ತು. ಆದ್ರೆ, ಅದನ್ನೆಲ್ಲ ಬಿಟ್ಟು ನಾನು ಮುದ್ದೇಬಿಹಾಳಕ್ಕೆ ಬಂದಿದ್ದೇನೆ. ನನಗೆ ನನ್ನ ಮಗ ಆದ್ಯತೆ ಅಲ್ಲ, ನನಗೆ ನೀವು ಮುಖ್ಯ ಎಂದರು.
ನರೇಂದ್ರ ಮೋದಿ ಅವರು ಪ್ರಧಾನಿ ಆಗಿ 10 ವರ್ಷವಾಯಿತು. ಒಂದೇ ದಿನ ಕೂಡಾ ಅವರು ವಿಶ್ರಾಂತಿ ತಗೆದುಕೊಂಡಿಲ್ಲ. ಈ ಬಾರಿ ರಾಜ್ಯದಲ್ಲಿ 28 ಕ್ಕೆ 28 ಮತಕ್ಷೇತ್ರ ಗೆಲ್ಲುವ ವಾತಾವರಣ ಇದೆ. ನಿನ್ನೆ ನಡೆದ ಚುನಾವಣೆಯಲ್ಲಿ 14ಕ್ಕೆ 14 ಕ್ಷೇತ್ರಗಳನ್ನು ಸಹ ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದರು.
ಸರ್ಕಾರ ದಿವಾಳಿಯಾಗಿದೆ, ಪಾಪರ್ ಆಗಿದೆ
ಹಣ, ಜಾತಿ, ಹೆಂಡದ ಬಲದಿಂದ ಹಿಂದೆ ಚುನಾವಣೆ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ನವರು ಅಂದುಕೊಂಡಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುದ್ದೇಬಿಹಾಳಕ್ಕೆ 10 ಕೋಟಿಯ ಅನುದಾನವಾದರೂ ಕೊಟ್ಟಿದ್ದಾರಾ..? ಸರ್ಕಾರ ದಿವಾಳಿಯಾಗಿದೆ, ಪಾಪರ್ ಆಗಿದೆ. ಎಲ್ಲ ಯೋಜನೆಗಳು ನಿಂತು ಹೋಗಿವೆ ಎಂದು ವಾಗ್ದಾಳಿ ನಡೆಸಿದರು.
ಲೋಕಸಭೆಯಲ್ಲಿ 400ಕ್ಕೂ ಅಧಿಕ ಸೀಟು ಗೆಲ್ಲುತ್ತೇವೆ
ಕೇವಲ ಪ್ರಚಾರದಲ್ಲಿ ಕಾಂಗ್ರೆಸ್ನವರು ತೊಡಗಿಕೊಂಡಿದ್ದಾರೆ. ಈ ಬಾರಿ ರಮೇಶ ಜಿಗಜಿಣಗಿ 3 ಲಕ್ಷಕ್ಕೂ ಅಧಿಕ ಮತದಿಂದ ಗೆಲ್ಲುತ್ತಾರೆ. ಎನ್ಡಿಎ ಸರ್ಕಾರ ದೇಶದಲ್ಲಿ ಹಲವಾರು ದೀರ್ಘಕಾಲಿನ ಸಮಸ್ಯೆಗೆ ಪರಿಹಾರ ಹುಡುಕಿದೆ. ರಾಮನ ಪ್ರತಿಷ್ಟಾಪನೆ ಮಾಡುವಾಗ ಕಾಂಗ್ರೆಸ್ನವರು ಯಾರೂ ಬರಲಿಲ್ಲ. ಈ ಬಾರಿ ಕಾಂಗ್ರೆಸ್ನವರಿಗೆ ತಕ್ಕ ಪಾಠ ಕಲಿಸಬೇಕಿದೆ. ಈ ಬಾರಿ ಲೋಕಸಭೆಯಲ್ಲಿ ಬಿಜೆಪಿ 400ಕ್ಕೂ ಅಧಿಕ ಸೀಟು ಗೆಲ್ಲಲಿದೆ, ರಾಜ್ಯದಲ್ಲಿ 28 ಮತಕ್ಷೇತ್ರ ಗೆಲ್ಲಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.