Thursday, May 9, 2024

ಕುಮಾರಣ್ಣ, ಯಡಿಯೂರಪ್ಪ ಸಿಎಂ ಆದ್ರೆ, ಮಳೆ ಬಂದು ಕೆರೆ ಕಟ್ಟೆಗಳು ತುಂಬುತ್ತವೆ : ನಿಖಿಲ್ ಕುಮಾರಸ್ವಾಮಿ

ಮಂಡ್ಯ : ಕುಮಾರಣ್ಣ, ಯಡಿಯೂರಪ್ಪ ಅವರು ಸಿಎಂ ಆದ್ರೆ, ಮಳೆ ಬಂದು ಎಲ್ಲಾ ಕೆರೆ ಕಟ್ಟೆಗಳು ತುಂಬುತ್ತವೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಮಂಡ್ಯದ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ತಂದೆ ಪರ ಪ್ರಚಾರ ಮಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ್ರೆ ಸಾಕು ರಾಜ್ಯದಲ್ಲಿ ಬರಗಾಲ ಬರುತ್ತೆ ಎಂದು ಟೀಕಿಸಿದರು.

ಕುಮಾರಣ್ಣ ಗೆದ್ದರೆ ಕೇವಲ ಸಂಸದರಾಗಿ‌ ಇರಲ್ಲ. ಬಿಜೆಪಿ ಕುಮಾರಣ್ಣರಿಗೆ ರಾಜ್ಯ ಕಟ್ಟಲು ಶಕ್ತಿ ತುಂಬುತ್ತೆ. ರಾಜ್ಯದಲ್ಲೂ ಜನರ ಆಶೀರ್ವಾದದಿಂದ ಬಿಜೆಪಿ ಹಾಗೂ ಜೆಡಿಎಸ್ ಅಧಿಕಾರ ಸ್ಥಾಪನೆ ಮಾಡುತ್ತೆ. ಐದು, ಆರು ಕೋಟಿ ಖರ್ಚು ಮಾಡಿ ಗ್ಯಾರಂಟಿ ಸಮಾವೇಶ ಮಾಡ್ತಾರೆ. ಕಾಂಗ್ರೆಸ್ ಸರ್ಕಾರದ ಐದು ಉಚಿತ ಗ್ಯಾರಂಟಿಗಳು ಶಾಶ್ವತ ಗ್ಯಾರಂಟಿ ಅಲ್ಲ ಎಂದು ಕುಟುಕಿದರು.

ಮಾಗಡಿ ಶಾಸಕ ಕಾಂಗ್ರೆಸ್‌ಗೆ ಮತ ಹಾಕಲಿಲ್ಲ ಅಂದ್ರೆ ಗ್ಯಾರಂಟಿ ರದ್ದು ಮಾಡ್ತೀವಿ ಅಂತಾರೆ. ದೇಶವನ್ನು ವಿಭಜನೆ ಮಾಡೋಣ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಹೇಳ್ತಾರೆ. ರಾಜ್ಯದಲ್ಲಿ ಇಬ್ಬರು ಹೃದಯವಂತರು ಸ್ಪರ್ಧೆ ಮಾಡಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಒಬ್ಬ ಹೃದಯವಂತ. ಒಬ್ಬ ಜನರ ಕಷ್ಟಕ್ಕೆ ಮರುಗುವ ಹೃದಯವಂತ ಕುಮಾರಣ್ಣ. ಒಂದು‌ ಕಡೆ ಹಣವಂತರು ಒಂದು ಕಡೆ ಹೃದಯವಂತರು. ಜನರು ನೀವೇ ಈ ಬಗ್ಗೆ ನಿರ್ಧಾರ ಮಾಡಬೇಕು ಎಂದು ಹೇಳಿದರು.

ಮಳವಳ್ಳಿ ವಿಧಾನಸಭಾ ಕ್ಷೇತ್ರದ ಹಲಗೂರು ಗ್ರಾಮದಿಂದ ನಿಖಿಲ್ ರೋಡ್ ಶೋ ಆರಂಭಿಸಿದರು. ಹಲಗೂರು, ಹಾಡ್ಲಿ ಸರ್ಕಲ್, ಬೆಳಕವಾಡಿ, ಬಿ.ಜಿ.ಪುರ, ಕಿರುಗಾವಲು, ಮಳವಳ್ಳಿ ಟೌನ್ ಸೇರಿ ಹಲವೆಡೆ ಪ್ರಚಾರ ನಡೆಸಿದರು. ಜೆಡಿಎಸ್ ಮಾಜಿ ಶಾಸಕ ಡಾ. ಅನ್ನದಾನಿ, ಬಿಜೆಪಿ ಮುಖಂಡ ಮುನಿರಾಜು ಅವರು ನಿಖಿಲ್​ಗೆ ಸಾಥ್ ನೀಡಿದರು.

RELATED ARTICLES

Related Articles

TRENDING ARTICLES