ಬೆಂಗಳೂರು : ರಾಜ್ಯದ ದಾವಣಗೆರೆ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಹಲವೆಡೆ ಇಂದು ಮಳೆಯಾಗಿದೆ. ಬಿಸಿಲ ಝಳದಿಂದ ಹೈರಾಣಾಗಿದ್ದ ನಾಡಿನ ಜನತೆ ಕೊಂಚ ನಿರಾಳರಾಗಿದ್ದಾರೆ.
ಇಂದಿನಿಂದ ಏಪ್ರಿಲ್ 18 ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.
ಇನ್ನೂ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮೂರು ದಿನ ಒಣಹವೆ ಮುಂದುವರೆಯಲಿದೆ. ಏಪ್ರಿಲ್ 15ರಿಂದ ಎರಡು ದಿನಗಳ ಕಾಲ ಮಳೆಯಾಗಲಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ತಾಪಮಾನ ಕಡಿಮೆಯಾಗಲಿದೆ. ಮುಂಜಾನೆಯಿಂದ ಕೊಂಚ ತಂಪಾದ ವಾತಾವರಣ ಇತ್ತು.
ಈ ಸುದ್ದಿ ಓದಿದ್ದೀರಾ? : ವಿಜಯಪುರದಲ್ಲಿ ವರುಣಾರ್ಭಟ: ಮಳೆಯ ಸಿಂಚನಕ್ಕೆ ಜನರು ಸಂತಸ
ಎರಡು ದಿನ ತಂಪಾದ ವಾತಾವರಣ
ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಉಷ್ಣಾಂಶದ ಜೊತೆಗೆ ಬಿಸಿ, ಆರ್ದ್ರ ಹವಾಮಾನ ಮುಂದುವರೆಯಲಿದೆ. ಇನ್ನ ಎರಡು ದಿನಗಳು ಸ್ವಲ್ಪ ತಂಪಾದ ವಾತಾವರಣ ಇರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಒಟ್ಟಿನಲ್ಲಿ ಬಿಸಿಲ ಬೇಗೆಗೆ ಬೇಸತ್ತ ಜನರಿಗೆ, ಮಳೆಗಾಗಿ ಕಾಯುತ್ತಿರುವ ರೈತಾಪಿ ವರ್ಗಕ್ಕೆ ಕೊನೆಗೂ ಹವಾಮಾನ ಇಲಾಖೆ ಸಿಹಿ ಸುದ್ದಿಯನ್ನ ನೀಡಿದೆ. ಇದರಿಂದ ಜನ ಕೊಂಚ ಕೂಲ್ ಆಗಲಿದ್ದಾರೆ.