ಹುಬ್ಬಳ್ಳಿ : ದಲಿತರ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಅಂತ ಒಪ್ಪಬೇಕಿತ್ತು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕುಟುಕಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಪ ಮಾತ್ರಕ್ಕೆ ಈ ಬಾರಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಟೀಕಿಸಿದರು.
ರಾಹುಲ್ ಗಾಂಧಿ ಅಪ್ರಬುದ್ಧ ನಾಯಕ. ಇಂತಹ ಅಪ್ರಬುದ್ಧ ನಾಯಕನನ್ನು ಸಿದ್ದರಾಮಯ್ಯ ಬೆಂಬಲಿಸುತ್ತಾರೆ. ಪ್ರಧಾನಿ ಅಭ್ಯರ್ಥಿಯನ್ನಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಶಿಫಾರಸ್ಸು ಮಾಡಲಾಗಿತ್ತು. ಇದಕ್ಕೆ ವಿರೋಧ ಮಾಡಿದವರೇ ಸಿದ್ದರಾಮಯ್ಯ. ರಾಹುಲ್ ಗಾಂಧಿ ಬಳಿ ಟೊಂಕ ಬಗ್ಗಿಸಿ ನಿಲ್ಲೋಕೆ ಖರ್ಗೆ ಹೆಸರು ವಿರೋಧಿಸಿದ್ದರು ಎಂದು ಚಾಟಿ ಬೀಸಿದರು.
ಸಿದ್ರಾಮಯ್ಯ ಸೋನಿಯಾಗೆ ಬೈದಿದ್ದರು
ರಾಹುಲ್ ಗಾಂಧಿಯಂತಹ ಅಪ್ರಬುದ್ಧ ನಾಯಕನನ್ನು ಓಲೈಸಲು ಈ ರೀತಿ ಮಾತನಾಡುತ್ತಿದ್ದಾರೆ. ರಾಜಕೀಯ ತೆವಲಿಗಾಗಿ ಸಿದ್ದರಾಮಯ್ಯ ಈ ರೀತಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ರೀತಿಯಲ್ಲಿ ಅಸಭ್ಯ ಭಾಷೆ ಬಳಸೋಕೆ ಆಗಲ್ಲ. ಸಿದ್ದರಾಮಯ್ಯ ಜೆಡಿಎಸ್ ಪಕ್ಷದಲ್ಲಿದ್ದಾಗ ಕಾಂಗ್ರೆಸ್ ನಾಯಕರ ವಿರುದ್ಧ ಬಾಯಿಗೆ ಬಂದಂತೆ ಟೀಕಿಸಿದ್ದರು. ಸೋನಿಯಾ ಸೇರಿ ಹಲವು ನಾಯಕರನ್ನು ಬೈದಿದ್ದರು ಎಂದು ಟೀಕಿಸಿದರು.
ರಾಗಾ ಮುಂದೆ ಯಾಕೆ ಟೊಂಕ ಬಗ್ಗಿಸಿ ನಿಲ್ತಾರೆ
ರಾಹುಲ್ ಗಾಂಧಿಗೆ ಈಗ 60 ವರ್ಷ. ಸಿದ್ದರಾಮಯ್ಯ ರಾಜಕಾರಣ ಮಾಡಲು ಆರಂಭಿಸಿಯೇ 50 ವರ್ಷಗಳಾಗಿವೆ. ಹೀಗಿರುವಾಗ ರಾಹುಲ್ ಗಾಂಧಿ ಮುಂದೆ ಯಾಕೆ ಟೊಂಕ ಬಗ್ಗಿಸಿ ನಿಲ್ಲುತ್ತೀರಿ. ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು ಯಾರೇ ಪದಾಧಿಕಾರಿಯಾಗಬೇಕೆಂದರೂ ಗಾಂಧಿ ಕುಟುಂಬವೇ ಬೇಕು. ಕಾಂಗ್ರೆಸ್ ಪಕ್ಷ ಒಂದು ಕುಟುಂಬಕ್ಕೆ ಸೀಮಿತ. ನಮ್ಮ ಪಕ್ಷದಲ್ಲಿ ಎಲ್ಲರಿಗೂ ಅವಕಾಶ ಇದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.