ಬೆಂಗಳೂರು : ರಾಮನಗರ ಜಿಲ್ಲೆಗೆ ಡಿ.ಕೆ. ಶಿವಕುಮಾರ್ ಅವರ ಕೊಡುಗೆಯೇನು? ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನೆಗೆ ಡಿಕೆಶಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಹಿರಂಗ ಚರ್ಚೆಗೆ ಸಿದ್ಧ. ಕುಮಾರಣ್ಣ ರೆಡಿನಾ..? ಎಂದು ಪ್ರತಿ ಸವಾಲ್ ಹಾಕಿದ್ದಾರೆ.
ಕುಮಾರಸ್ವಾಮಿ ಅವರು ಎಲ್ಲಿಗೆ ಬೇಕಾದರೂ ಚರ್ಚೆಗೆ ಬರಲಿ. ಅವರೇ ಟೈಮ್ ಫಿಕ್ಸ್ ಮಾಡಲಿ. ಒಂದೆರೆಡು ದಿನ ಸಮಯ ಕೊಡಿ, ಆಮೇಲೆ ಸಮಯ ಫಿಕ್ಸ್ ಮಾಡಲಿ. ನೀವೇ ಮಾಧ್ಯಮದವರು ಟೈಮ್ ಫಿಕ್ಸ್ ಮಾಡಿ, ನಾನು ಬರುತ್ತೇನೆ ಎಂದು ಹೇಳಿದ್ದಾರೆ.
ನಮ್ಮ ಯಡವಟ್ಟಿನಿಂದ 4 ಸೀಟು ಕಳೆದುಕೊಂಡ್ವಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ 140 ಸೀಟು ಬರುತ್ತವೆ ಎಂದು ಜನರಿಗೆ ನಾವು ಹೇಳಿದ್ವಿ. 3-4 ಸೀಟು ನಮ್ಮ ಯಡವಟ್ಟಿನಿಂದ ಕಳೆದುಕೊಂಡ್ವಿ. 136 ಸ್ಥಾನಗಳು ವಿಧಾನಸಭೆ ಚುನಾವಣೆಯಲ್ಲಿ ಬಂದ್ವು. ಪ್ರತಿ ದಿನ ಜನರು ತತ್ತರಿಸಿದ್ರು, ಕೋವಿಡ್ ನಿಂದ ಮಾನಸಿಕವಾಗಿ ನರಕ ಅನುಭವಿಸಿದ್ರು. ಅವರಿಗೆ ನಾವು ಆರ್ಥಿಕವಾಗಿ ಶಕ್ತಿ ತುಂಬಬೇಕಿತ್ತು. ಈ ಹಿನ್ನಲೆ ಐದು ಗ್ಯಾರಂಟಿಗಳನ್ನ ಘೋಷಣೆ ಮಾಡಿದ್ವಿ ಎಂದು ಹಳೆ ನೆನಪು ಮೆಲುಕು ಹಾಕಿದ್ದಾರೆ.
ಗ್ಯಾರಂಟಿಗಳನ್ನ ಜನರಿಗೆ ತಿಳಿಸುವಂತ ಕೆಲಸ ಆಗ್ತಿಲ್ಲ
ಪ್ರತಿಯೊಂದು ಮಹಿಳೆಯಲ್ಲಿ ನಾಯಕತ್ವ ಗುಣ ಇರುತ್ತದೆ. ಅದನ್ನ ಬಳಿಸಿಕೊಳ್ಳಬೇಕು. ನಾನು ಕಲ್ಪನೆ ಮಾಡಿಕೊಂಡಿರುವಂತಹ ಕಾರ್ಯಕ್ರಮ ಆಗಲಿಲ್ಲ. ಆದಾದ ಮೇಲೆ ನಾನು ನಮ್ಮ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನ ಕರೆದುಕೊಂಡು ಬಂದು ಗ್ಯಾರಂಟಿ ಘೋಷಣೆ ಮಾಡಿಸಿದೆ. ಆದರೆ, ನಮ್ಮಲ್ಲಿ ಗ್ಯಾರಂಟಿಗಳನ್ನ ಜನರಿಗೆ ತಿಳಿಸುವಂತ ಕೆಲಸ ಆಗುತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.