ಹಾಸನ : ಹಾಸನ ಜಿಲ್ಲಾಧಿಕಾರಿ ಹಾಗು ಚುನಾವಣಾಧಿಕಾರಿಯಾಗಿರುವ ಸತ್ಯಭಾಮ ಅವರ ವಿರುದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಗಂಭೀರ ಸ್ವರೂಪದ ಆರೋಪಮಾಡಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಮಾರ್ಚ್ 20 ರಂದು ಕೇಂದ್ರ ಚುನಾವಣ ಆಯೋಗಕ್ಕೆ ದೂರು ನೀಡಿರುವ ಮಾಜಿ ಪ್ರಧಾನಿ ದೇವೇಗೌಡ ಅವರು, ಜಿಲ್ಲಾಧಿಕಾರಿ ವಿರುದ್ದ ಹಲವು ಆರೋಪಗಳನ್ನು ಮಾಡಿದ್ದಾರೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಎನ್ ರಾಜಣ್ಣ ಅವರ ಅಣತಿಯಂತೆ ಮಾತ್ರ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಏಜೆಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ರಾಜಣ್ಣ ಸಮುದಾಯಕ್ಕೆ ಸೇರಿರುವ ಸತ್ಯಭಾಮ ಅವರಿಂದ ಜಿಲ್ಲೆಯಲ್ಲಿ ನಿಷ್ಪಕ್ಷಪಾತ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಹಾಸನ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಜಿಲ್ಲೆಯ ಜನರ ಜೊತೆ ಸೌಜನ್ಯದ ವರ್ತನೆ ತೋರೋದಿಲ್ಲ, ತಮ್ಮ ಸಹೊದ್ಯೋಗಿಗಳಿಗೆ ಗೌರವ ಕೊಡಲ್ಲ, ಎಲ್ಲರೊಟ್ಟಿಗು ಜಗಳ ಮಾಡಿಕೊಳ್ತಾರೆ,
ಈ ಹಿಂದೆ ಅವರು ಕೋಲಾರದಲ್ಲಿ ಇದ್ದಾಗಲು ಸಹೋದ್ಯೋಗಿಗಳ ಜೊತೆ ಜಗಳ ಮಾಡಿಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ ಬಳಿಕ ಸಿಎಂ ರಾಜೀನಾಮೆ: ಸುಳಿವು ಕೊಟ್ಟ ಗುಬ್ಬಿ ಶಾಸಕ ಶ್ರೀನಿವಾಸ್
ಅಷ್ಟೆ ಅಲ್ಲದೆ, ಫೆಬ್ರವರಿ 24 ಹಾಗು ಮಾರ್ಚ್1 ರಂದು ನಡೆದ ಸಿಎಂ ಕಾರ್ಯಕ್ರಮಗಳಿಗೆ ಜಿಲ್ಲೆಯ ವಿವಿಧ ಇಲಾಖೆಗಳಿಂದ ಹತ್ತಾರು ಲಕ್ಷ ಹಣ ವಸೂಲಿ ಮಾಡಿ ಜನರಿಗೆ ಹಂಚಿದ್ದಾರೆ ಎನ್ನುವ ಆರೋಪವು ಇದೆ,
ಆಡಳಿತ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಾಸನದಲ್ಲಿ ತೀವ್ರ ಬರಗಾಲ ಇದೆ, ಕುಡಿಯೊ ನೀರಿನ ಸಮಸ್ಯೆ ಇದೆ ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಇದನ್ನ ನಿಭಾಯಿಸುವಲ್ಲಿ ವಿಫಲವಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ಮುಕ್ತ ಹಾಗು ನ್ಯಾಯ ಸಮ್ಮತ ಚುನಾವಣೆ ನಡೆಸಲು ಹಾಸನ ಜಿಲ್ಲಾಧಿಕಾರಿಗಳನ್ನು ಕೂಡಲೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಿಗೆ ಅವರು ದೂರು ಸಲ್ಲಿಸಿದ್ದಾರೆ.