ಬೆಂಗಳೂರು : ರಾಮನಗರ ನಾಯಕರು ಕುಕ್ಕರ್ ಸಂಸ್ಕೃತಿ ಶುರು ಮಾಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕುಟುಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15 ದಿನದಿಂದ ನಿರಂತರವಾಗಿ ಕಾಂಗ್ರೆಸ್ ಪಕ್ಷದ ರಾಮನಗರ ನಾಯಕರು ಒಂದು ಸಂಸ್ಕೃತಿ ಶುರು ಮಾಡಿದ್ದಾರೆ. ಈ ಹಿಂದೆ 11 ವಿಧಾನಸಭಾ ಕ್ಷೇತ್ರದಲ್ಲಿ ಗಿಫ್ಟ್ ಕಾರ್ಡ್ಗಳನ್ನ ಕೊಟ್ಟಿದ್ರು ಎಂದು ಆರೋಪಿಸಿದರು.
ಇದು ಮುಗ್ದ ಮತದಾರರ ದಿಕ್ಕು ತಪ್ಪಿಸಿರೋದು ಒಂದು ಇತಿಹಾಸ ಆಗಿತ್ತು. ಈಗ ಕುಕ್ಕರ್ ಕೊಡುವ ಪ್ರವೃತ್ತಿ ಶುರು ಮಾಡಿದ್ದಾರೆ. 6 ಲಕ್ಷಕ್ಕೆ ಆರ್ಡರ್ ಕೊಟ್ಟಿದ್ದಾರೆ, ಈಗಾಗಲೇ 4 ಲಕ್ಷ ಕುಕ್ಕರ್ ಹಂಚಿದ್ದಾರೆ. ಚುನಾವಣಾ ಆಯೋಗ ಯಾವ ರೀತಿ ಚುನಾವಣೆ ಮಾಡುತ್ತಿದೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ ಎಂದು ಬೇಸರಿಸಿದರು.
ಧರ್ಮ ಮಾರ್ಗದಲ್ಲಿ ಚುನಾವಣೆ ಆಗಲಿ
ಜಿಲ್ಲಾಧಿಕಾರಿಗಳು ಕೂಡ ಯಾವುದೇ ಕುಕ್ಕರ್ ಹಂಚಿಕೆ ಆಗುತ್ತಿಲ್ಲ ಅಂತ ಉತ್ತರ ಕೊಟ್ಟಿದ್ದಾರೆ. ಅಧಿಕಾರವನ್ನ ದುರುಪಯೋಗ ಮಾಡಿಕೊಂಡು ಚುನಾವಣೆ ಮಾಡಬೇಡಿ. ಧರ್ಮ ಮಾರ್ಗದಲ್ಲಿ ಚುನಾವಣೆ ಆಗಲಿ. ಜನರಿಗೆ ದಿಕ್ಕು ತಪ್ಪಿಸಿ ಚುನಾವಣೆ ನಡೆಯಬಾರದು. ಗ್ಯಾರಂಟಿಗಳನ್ನ ಕೊಟ್ಟಿದ್ದೀರಾ, ಆದ್ರು ನಿಮಗೆ ನಂಬಿಕೆ ಇಲ್ವಾ ಜನ ನಿಮಗೆ ಮತ ಹಾಕುತ್ತಾರೆ ಅಂತ ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿಗಳನ್ನ ಎಷ್ಟು ದಿನ ಕೊಡುತ್ತೀರಾ?
ಗ್ಯಾರಂಟಿ ಯೋಜನೆ ಕೊಡೋದಕ್ಕೆ ನಮ್ಮ ತಕರಾರು ಇಲ್ಲ. ಗ್ಯಾರಂಟಿಗಳನ್ನ ಎಷ್ಟು ದಿನ ಕೊಡುತ್ತೀರಾ? ಗ್ಯಾರಂಟಿ ಹೆಸರಲ್ಲಿ ಜನರನ್ನ ದಿಕ್ಕು ತಪ್ಪಿಸುವ ಕೆಲಸ ಆಗಿದೆ. ಶಾಸಕರನ್ನ ಕೇಳಿ ಅಭಿವೃದ್ಧಿ ಕಾರ್ಯಗಳಿಗೆ ಒಂದು ರೂಪಾಯಿ ಕೂಡ ಕೊಡುತ್ತಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಚಾಟಿ ಬೀಸಿದರು.