ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಹಿಂದೆಂದು ಕೇಳರಿಯದ ರೀತಿಯಲ್ಲಿ ಹವಾಮಾನ ವೈಪರೀತ್ಯವನ್ನು ಎದುರಿಸುವಂತ ಪರಿಸ್ಥಿತಿ ಎದುರಾಗಿದ್ದು. ಬಿರು ಬಿಸಿಲಿಗೆ ಬೆಂಗಳೂರಿನ ಜನರು ಕಂಗಾಲಾಗಿದ್ದರು, ಮೇ ತಿಂಗಳು ಆರಂಭವಾಗುತ್ತಿದ್ದಂತೆ ಮಳೆರಾಯನ ಆಗಮನದಿಂದ ಕಾದ ಕಾವಲಿಯಾಗಿದ್ದ ಸಿಟಿ ಇದೀಗ ಕೂಲ್ ಆಗುತ್ತಿದೆ. ಇನ್ನು ಇಂದಿನಿಂದ ಮೇ 11ರವರೆಗೂ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ.
ಬುಧವಾರ ನಗರದ ಮೆಜೆಸ್ಟಿಕ್, ಕೆ ಆರ್ ಸರ್ಕಲ್, ಟೌನ್ ಹಾಲ್, ಕನಕಪುರ ರಸ್ತೆ, ಕಾರ್ಪೋರೇಷನ್, ವಿಧಾನಸೌಧ ಸೇರಿದಂತೆ ನಗರದ ವಿವಿಧೆಡೆ ಮಳೆ ಬಂದಿದ್ದು ಕೆಲಸ ಮುಗಿಸಿ ಮನೆಗಳ ತೆರಳುವವರು ಪರದಾಡುವಂತಾದರೆ, ಟೌನ್ ಹಾಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದನ್ನೂ ಓದಿ: HDK ಹಿಟ್ ಅಂಡ್ ರನ್ ಗಿರಾಕಿ ಅನ್ನೋದು ಗೊತ್ತಿದೆ: ಡಿಕೆ ಶಿವಕುಮಾರ್
ಕರ್ನಾಟಕದ ಒಳನಾಡಿನಲ್ಲಿ 1.5 ಕೀಮಿ ಎತ್ತರಲ್ಲಿ ವಾಯು ಭಾರ ಕುಸಿತ ಹಿನ್ನಲೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇವತ್ತಿನಿಂದ 11 ನೇ ತಾರೀಖಿನ ವರೆಗೆ ಮಳೆ ಅಬ್ಬರಿಸಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದ್ದು, ನಾಳೆ ಹಾಗೂ ನಾಡಿದ್ದು ಬೆಂಗಳೂರಿಗೆ ಎರಡು ದಿನ ಯಲ್ಲೂ ಅಲರ್ಟ್ ಘೋಷಣೆ ಮಾಡಲಾಗಿದೆ.
ಮೇ 12 ರ ನಂತರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಟ್ಟಿನಲ್ಲಿ ಬಿಸಿಲಿನ ಧಗೆಗೆ ಬೇಸತ್ತ ಸಿಲಿಕಾನ್ ಮಂದಿಗೆ ಇನ್ನೂ ಮೂರು ದಿನಗಳ ಕಾಲ ವರುಣ ತಂಪೆರೆಯಲಿದ್ದಾನೆ.