ಉಡುಪಿ : ಈಶ್ವರಪ್ಪ ಸ್ಪರ್ಧಿಸಿದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ. ಈಶ್ವರಪ್ಪ ಹಿಂದುತ್ವದ ಮತ ಪಡೆದರೆ ರಾಘವೇಂದ್ರ ಮೂರನೇ ಸ್ಥಾನಕ್ಕೆ ಹೋಗುತ್ತಾರೆ ಎಂದು ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಬಿಜೆಪಿ ಪಕ್ಷ ಕಟ್ಟಿದ ನಾಯಕ. ಅವರಿಗೂ ಬೇಸರವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಈಗಲೇ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದರು.
ಈ ಹಿಂದೆ ಬೈಂದೂರಲ್ಲಿ ಭಾರಿ ಅಂತರದಿಂದ ರಾಘವೇಂದ್ರರನ್ನು ಗೆಲ್ಲಿಸಿದ್ದೇವೆ. ಕಳೆದ ಎರಡು ಚುನಾವಣೆಯಲ್ಲಿ 14 ಸಾವಿರ ಲೀಡ್ ಇತ್ತು. ಕಳೆದ ಬಾರಿ 75 ಸಾವಿರ ಲೀಡ್ ಕೊಟ್ಟಿದ್ದೇವೆ. ಈ ಬಾರಿ ಬೈಂದೂರಿನಲ್ಲಿ 14 ಸಾವಿರಕ್ಕಿಂತ ಹೆಚ್ಚು ಮತ ಬಿಜೆಪಿಗೆ ಸಿಗಲ್ಲ. ಬಿಜೆಪಿಯಲ್ಲಿ ಪ್ರಾಮಾಣಿಕವಾಗಿ ದುಡಿದವರನ್ನು ಗುರುತಿಸಿಲ್ಲ ಎಂದು ಕುಟುಕಿದರು.
ಪ್ರಾಮಾಣಿಕರು ಪಕ್ಷ ಬಿಟ್ಟು ಹೋಗುವಂತಾಗಿದೆ
ಪ್ರಾಮಾಣಿಕರು ಬಿಜೆಪಿ ಪಕ್ಷ ಬಿಟ್ಟು ಹೊರಗೆ ಹೋಗುವಂತಾಗಿದೆ. ಚುನಾವಣೆ ನಡೆದು 9 ತಿಂಗಳಾದರೂ ನನ್ನನ್ನು ಯಾರು ಮಾತನಾಡಿಸಿಲ್ಲ. ಕಾಂಗ್ರೆಸ್ನವರು ಆಹ್ವಾನಿಸಿದರು ನಾನು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಿ ಕಾಂಗ್ರೆಸ್ಸಿಗೆ ಅತಿ ಹೆಚ್ಚು ಮತ ಬೀಳುವಂತೆ ಮಾಡುತ್ತೇನೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಹೋರಾಟ ಇದೆ ಎಂದು ಸುಕುಮಾರ ಶೆಟ್ಟಿ ಹೇಳಿದರು.