ಹಾಸನ : ನನ್ನ ಮಗನಿಗೆ ಆದಂತೆ ಇವತ್ತು ನನ್ನ ಸಹೋದರ ಮಗನಿಗೆ ಹೆಚ್ಚು ಕಡಿಮೆ ಆಗಬಾರದು. ದಯವಿಟ್ಟು ಅವನನ್ನು ಉಳಿಸಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
ಹಾಸನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿರುವ ತಪ್ಪುಗಳು ನಿಮ್ಮಲ್ಲಿ ಆಕ್ರೋಶವಾಗಿ ತಿರುಗಿದ್ರೆ ಏನಾಗುತ್ತೆ? ಅಧಿಕಾರ ಬಂದಾಗ ಸ್ವಾರ್ಥಕ್ಕೆ ರಾಜಕಾರಣ ಮಾಡಲ್ಲ. ರಾಜ್ಯಕ್ಕಾಗಿ ಜಿಲ್ಲೆಗಾಗಿ ದುಡಿದ್ದೇವೆ, ದಯಮಾಡಿ ನಮ್ಮನ್ನು ಕೈ ಬಿಡಬೇಡಿ ಎಂದು ಭಾವುಕರಾದರು.
ನನ್ನ ಮಗನಿಗೆ ಮಂಡ್ಯದಿಂದ ನಿಲ್ಲಬೇಡ ಎಂದೆ, ಯಾವ ಕಾರಣಕ್ಕೂ ನಿಲ್ಲಬೇಡ ಎಂದೆ. ಎಲ್ಲಾ ಶಾಸಕರು ತಗೊಂಡೋಗಿ ನಿಲ್ಲಿಸಿದ್ರು. ಮೂರು ಜನ ಮಂತ್ರಿಗಳು ಇದ್ದರು. ನಿಖಿಲ್ ಕುಮಾರಸ್ವಾಮಿ ಐದು ಲಕ್ಷ ಮತ ನೀಡಿದ್ರು. ಅವನು ಜನಗಳ ಪರವಾಗಿ ಕಮಿಟ್ಮೆಂಟ್ ಇಟ್ಕೊಂಡಿದ್ದಾನೆ. ನೋಡೋಣ ದೇವರೇ ತೀರ್ಮಾನ ಮಾಡ್ತಾನೆ. ಆ ದೇವರೇ ಅವನಿಗೆ ಆಶೀರ್ವಾದ ಮಾಡ್ತಾನೆ, ಎಲ್ಲಾ ದೇವರ ಇಚ್ಛೆ ಎಂದು ತಿಳಿಸಿದರು.
ಸುಮಲತಾ ಗೆಲ್ಲಲು ಕಾಂಗ್ರೆಸ್ ಮತಗಳು ಕಾರಣ
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲ್ಲಲು ಕಾಂಗ್ರೆಸ್ ಮತಗಳು ಕಾರಣ. ಮುಖ್ಯಮಂತ್ರಿಗಳೇ ಇದನ್ನು ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಜನ ಎಂಟು ಸ್ಥಾನಗಳನ್ನು ಗೆಲ್ಲಿಸಿ, ನನ್ನನ್ನು ಮುಖ್ಯಮಂತ್ರಿ ಮಾಡಿದ್ರು. ಮಂಡ್ಯ ಜಿಲ್ಲೆಯ ಜನ ಯಾವತ್ತೂ ನನ್ನ ಕೈಬಿಟ್ಟಿಲ್ಲ. ನನ್ನ ಮಗ ನಿಖಿಲ್ಗೆ ಆದಂತೆ ಇವತ್ತು ನನ್ನ ಸಹೋದರ ಮಗ ಪ್ರಜ್ವಲ್ಗೆ ಹೆಚ್ಚು ಕಡಿಮೆ ಆಗಬಾರದು. ದಯವಿಟ್ಟು ಅವನನ್ನು ಉಳಿಸಿಕೊಳ್ಳಿ ಎಂದು ಮನವಿ ಮಾಡಿದರು.