ರಾಯಚೂರು : ಆಕಾಶ-ಭೂಮಿ ಒಂದಾದರೂ ಸಹ ಅಂಬೇಡ್ಕರ್ ಬರೆದ ಸಂವಿಧಾನದ ಒಂದು ಶಬ್ಧ ಕೂಡ ಬದಲಾಗಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ತಿದ್ದುಪಡಿ ಹೇಳಿಕೆ ಬಗ್ಗೆ ರಾಯಚೂರಿನಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಬರೆದ ಸಂವಿಧಾನದ ಮೇಲೆಯೇ ಇಂದು ಬಿಜೆಪಿ ಸರ್ಕಾರ ನಡೀತಿದೆ ಎಂದರು.
ಅಂಬೇಡ್ಕರ್ ವಿಚಾರಕ್ಕೆ ಬಂದ್ರೆ ಪ್ರತಿಯೊಬ್ಬರು ಭಗವದ್ಗೀತೆ, ರಾಮಾಯಣಕ್ಕೆ ಯಾವ ರೀತಿ ಗೌರವಿಸುತ್ತೇವೋ.. ಅದೇ ರೀತಿ ಭಾರತ ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಅನಂತಕುಮಾರ್ ಹೆಗಡೆ ಯಾವ ಅರ್ಥದಲ್ಲಿ ಈ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಈ ಹೇಳಿಕೆ ಅನಂತಕುಮಾರ್ ಅವರ ವೈಯಕ್ತಿಕ ಹೇಳಿಕೆ. ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದರು.
ಸಂವಿಧಾನ ಬದಲಾವಣೆ ಪ್ರಶ್ನೆಯೇ ಇಲ್ಲ
ಸಂವಿಧಾನ ಬದಲಾದ್ರ ರಕ್ತಪಾತ ಆಗುತ್ತೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನ ವಿಚಾರ ಬಂದಾಗ ಕಾಂಗ್ರೆಸ್ ನಾಯಕರು ಇದನ್ನು ದುರುಪಯೋಗ ಮಾಡ್ತಿದ್ದಾರೆ. ಅಂಬೇಡ್ಕರ್ ಬರೆದ ಸಂವಿಧಾನ ರೀತಿಯಲ್ಲೇ ಪ್ರಧಾನಿ ಮೋದಿ ಸರ್ಕಾರ ನಡೆಸುತ್ತಿದ್ದಾರೆ. ಸಂವಿಧಾನ ಬದಲು ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಮೋದಿ ಸಂವಿಧಾನಕ್ಕೆ ಗೌರವ ಕೊಡ್ತಿದ್ದಾರೆ
ದೇಶದ ನರೇಂದ್ರ ಮೋದಿಯವರು ಸಂವಿಧಾನ ವಿಚಾರದಲ್ಲ, ಸಂವಿಧಾನಕ್ಕೆ ಗೌರವ ಕೊಡ್ತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಕೊಡ್ತಿದ್ದಾರೆ. ವೈಯಕ್ತಿಕ ವಿಚಾರಗಳಿಗೂ ಪಾರ್ಟಿಗೂ ಯಾವುದೇ ಸಂಬಂಧ ಇಲ್ಲ. ನಮ್ಮ ಪಕ್ಷ ಸ್ಪಷ್ಟವಾಗಿ ಹೇಳಿದೆ, ನಮಗೂ ಅವರ ಹೇಳಿಕೆಗೂ ಸಂಬಂಧ ಇಲ್ಲ ಎಂದು ಶ್ರೀರಾಮುಲು ಸ್ಪಷ್ಟನೆ ನೀಡಿದರು.