Friday, May 10, 2024

ಮೋದಿ ಬಗ್ಗೆ ಮಾತನಾಡಲು ನೀವು ಯಾರು? ಸಿದ್ದು ವಿರುದ್ಧ ದೇವೇಗೌಡ ಟೀಕಾಪ್ರಹಾರ

ಬೆಂಗಳೂರು: ಶೂನ್ಯ ಸಾಧನೆ ಭಯಕ್ಕೆ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಎಂದು ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಮುಂದಿನ ಚುನಾವಣೆಯಲ್ಲಿ ಅವರಿಗೆ ಉತ್ತರ ಸಿಗುತ್ತದೆ ಎಂದು ಗುಡುಗಿದರು.

ಪಕ್ಷದ ರಾಜ್ಯ ಕಾವೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಮಾತನಾಡುವಾಗ ಮುಂದಿನ ಜನ್ಮವಿದ್ದರೆ ಮುಸ್ಲಿಂಮರಲ್ಲಿ ಹುಟ್ಟುತ್ತೇನೆ ಎಂದು ದೇವೇಗೌಡರು ಹೇಳಿದ್ದರು. ಈಗ ಬಿಜೆಪಿ ಜತೆ ಸೇರಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಕುಮಾರಸ್ವಾಮಿ ಅವರ ಸರಕಾರವನ್ನು ತೆಗೆದಿದ್ದು ಯಾರು? ಯಾವ ಕಾರಣಕ್ಕೆ ತೆಗೆದಿರಿ? ಎಂದು ಅಬ್ಬರಿಸಿದರು.

ಬಿಜೆಪಿ ಜತೆ ಜೆಡಿಎಸ್ ವಿಲೀನ ಅಂತ ಸಿದ್ದರಾಮಯ್ಯನವರೇ ತೀರ್ಮಾನ ಮಾಡಿಬಿಟ್ಟರು. ಮೋದಿಗೆ ಪೈಪೋಟಿ ನೀಡುವ ಸಮರ್ಥ ನಾಯಕ ಸಿದ್ದರಾಮಯ್ಯ ಎಂದಿದ್ದ ಮಂಡ್ಯದ ನಾಯಕರೊಬ್ಬರು ಹೇಳಿದ್ದರು. ಜಾತ್ಯತೀತ ಎಂಬ ಪದ ಬಳಕೆ ಮಾಡುವ ನೈತಿಕತೆ ಜೆಡಿಎಸ್ ಗೆ ಇಲ್ಲ ಎಂದು ಕಾಂಗ್ರೆಸ್ ನವರು ಹೇಳಿದ್ದರು. ಹಾಗಾದರೆ, ಮುಸ್ಲಿಮರಿಗೆ ನಾನು ಕೊಟ್ಟಿದ್ದ 4% ಮೀಸಲಾತಿಯನ್ನು ಇವರು ಮತ್ತೆ ಕೊಡಲಿ ನೋಡೋಣ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಹೈಕೋರ್ಟ್​ ನ್ಯಾಯಾದೀಶ ಹುದ್ದೆಗೆ ರಾಜೀನಾಮೇ ನೀಡಿ ಬಿಜೆಪಿ ಸೇರಿದ ನ್ಯಾಯಮೂರ್ತಿ!

ಬಿಜೆಪಿ ಜತೆ ಕುಮಾರಸ್ವಾಮಿ ಸರಕಾರ ಮಾಡಿದಾಗ ಈ ಮಂಡ್ಯದ ನಾಯಕ ಸಾರಿಗೆ ಮಂತ್ರಿಯಾಗಿದ್ದರು. ಅದು ಮರೆತು ಹೋಯ್ತಾ ಇವರಿಗೆ? ಎಂದು ಮಾಜಿ ಪ್ರಧಾನಿಗಳು ಕೆಂಡಾಮಂಡಲರಾದರು.

ಸಿದ್ದರಾಮಯ್ಯ ಆಡಳಿತ ವೈಖರಿಗೆ ಕಿಡಿ:

ಸಿದ್ದರಾಮಯ್ಯ ಅವರೇ ನನ್ನ ಜತೆ ಹಣಕಾಸು ಮಂತ್ರಿ ಅಗಿದ್ದರು. ಒಂದೂವರೆ ವರ್ಷದಲ್ಲಿ ಒಂದು ನಿಗಮ ಮಂಡಳಿಗೂ ನಾನು ಅಧ್ಯಕ್ಷರನ್ನು ನೇಮಕ ಮಾಡಲಿಲ್ಲ. ಆಗ ನಮಗೆ 113 ಸ್ಥಾನ ಇತ್ತು. ಈಗ ನಿಮಗೆ 136 ಸ್ಥಾನ ಕೊಟ್ಟು ಜನ ತೀರ್ಪು ನೀಡಿದ್ದಾರೆ. 5 ಗ್ಯಾರಂಟಿ ಜನರಿಗೆ ತಲುಪಿದೆಯಾ ಇಲ್ಲವೇ ಎಂದು ನೋಡುವುದಕ್ಕೆ 5 ಮಾಜಿ ಮಂತ್ರಿಗಳನ್ನು ನೇಮಕ ಮಾಡಿದ್ದೀರಿ. ಜಿಲ್ಲಾ ಮಟ್ಟದಲ್ಲೂ ಸಮಿತಿ ನೇಮಕ ಮಾಡುತ್ತಿದ್ದೀರಿ. 136 ಶಾಸಕರು, 20-25 ಎಂಎಲ್ಸಿಗಳು, 95 ಜನ ಬೋರ್ಡ್ ಅಧ್ಯಕ್ಷರು, ಅವರಿಗೆ ಸಂಪುಟ ದರ್ಜೆ, ಸಲಹೆಗಾರರಿಗೂ ಸಂಪುಟ ದರ್ಜೆ. ಈಗ ಪಕ್ಷದ ಕಾರ್ಯಕರ್ತರು, ಮುಖಂಡರ ನೇಮಕ ಆಗಿದೆ. ಇದು ಇವರ ಅಡಳಿತದ ವೈಖರಿ ಎಂದು ನೇರವಾಗಿ ಸಿದ್ದರಾಮಯ್ಯ ಅವರನ್ನೇ ತರಾಟೆಗೆ ತೆಗೆದುಕೊಂಡರು ಮಾಜಿ ಪ್ರಧಾನಿಗಳು.

ಕೇಂದ್ರದಿಂದ ನಮಗೆ ಹಣ ಬಂದಿಲ್ಲ ಅಂತಾರೆ ಇವರು. ಈ ದೇವೇಗೌಡ ಸಿಎಂ ಆಗಿದ್ದಾಗ ಕೇಂದ್ರದವರು ರೈತರ ಸಾಲಮನ್ನಾ ನಾವೇ ಮಾಡುತ್ತೇವೆ ಅಂದರು. ಕೊನೆಪಕ್ಷ ನಾವು ಬಡ್ಡಿ ಮನ್ನಾ ಮಾಡುತ್ತೇವೆ, ಒಪ್ಪಿಗೆ ಕೊಡಿ ಎಂದರೂ ಅವರು ಒಪ್ಪಿಗೆ ಕೊಡಲಿಲ್ಲ. ಅವತ್ತು ಸಿದ್ದರಾಮಯ್ಯ ನನ್ನ ಸಂಪುಟದಲ್ಲಿ ಹಣಕಾಸು ಮಂತ್ರಿ ಆಗಿದ್ದರು. ನಿಮಗೆ ಪ್ರಾಮಾಣಿಕತೆ ಇದ್ದರೆ ಅವತ್ತು ಏನ್ ನಡೀತು ಹೇಳಿ. ಈಗ ಯಾಕೆ ಮೋದಿ ಬಗ್ಗೆ ಮಾತಾಡ್ತೀರಾ? ಎಂದು ಮಾಜಿ ಪ್ರಧಾನಿಗಳು ಸಿದ್ದರಾಮಯ್ಯ ಅವರನ್ನು ಖಾರವಾಗಿ ಪ್ರಶ್ನಿಸಿದರು.

ಮೋದಿ ಬಗ್ಗೆ ಮಾತನಾಡಲು ನೀವು ಯಾರು? :

ಬೆಳಗ್ಗೆ ಎದ್ದರೆ ಮೋದಿ ಮೋದಿ ಅಂತಾರೆ. ಹಿಂದೆ ಮನಮೋಹನ್ ಸಿಂಗ್ ಅವರು ಏನು ಕೊಟ್ಟಿದ್ದರು? ಅದನ್ನು ಇವರು ಹೇಳಬೇಕು. ಅದಕ್ಕೂ ಮೊದಲು ವಾಜಪೇಯಿ ಅವರು ಏನು ಕೊಟ್ಡಿದ್ದಾರೆ ಹೇಳಿ. ಸಿದ್ದರಾಮಯ್ಯನವರೇ ಸತ್ಯ ಹೇಳಿ. ಮೋದಿ ಈ ದೇಶದಲ್ಲಿರುವ ಸಮರ್ಥ ನಾಯಕ ಅನ್ನುವುದನ್ನು ಇಲ್ಲ ಎನ್ನುವುದಕ್ಕೆ ಇವರು ಯಾರು? WHO IS HE? ಮೋದಿ ಅವರನ್ನು ಇಡೀ ವಿಶ್ವ ಒಪ್ಪಿದೆ. ಮಾತಾಡೋಕು ಇತಿಮಿತಿ ಇರಬೇಕು ಎಂದು ಕಿಡಿಕಿಡಿಯಾದರು.

ಕಿರಿಯ ಅಧಿಕಾರಿ ನೇಮಕ ಪ್ರಸ್ತಾಪಿಸಿದ ಮಾಜಿ ಪ್ರಧಾನಿಗಳು:

ನಾನು ಯಾವುದೇ ಕಾಮಗಾರಿಯ ಎಲ್ ಒಸಿ ನೀಡಬೇಕಾದರೆ ಐದು ಪೈಸೆ ಪಡೆದಿದ್ದೇನೆ ಎಂದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 5 ಪೈಸೆ ತಗೊಳ್ಳೋದು ಎಲ್ಲಾದರೂ ಉಂಟೆ? ಅದು ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತರುತ್ತಾ? ಅವರು ಒಬ್ಬರು ನೀರಾವರಿ ಕಾರ್ಯದರ್ಶಿಯನ್ನು ನೇಮಕ ಮಾಡಿದ್ದಾರೆ. ನಾನು ಫೊನ್ ಮಾಡಿದೆ ಫೋಲ್ ರಿಸೀವ್ ಮಾಡಿಲ್ಲ. ನಾನು ಒಂದು ದೇಶದ ಸಣ್ಣ ರಾಜಕಾರಣಿ. ಪಾಪ ಅವರ ಕಾರ್ಯದರ್ಶಿ ಫೋನ್ ತೆಗೆದುಕೊಂಡಿಲ್ಲ. ಅವರು ಯಾರು ಅಂತ ಕೇಳಿದರೆ ಸಿದ್ದರಾಮಯ್ಯ ಅವರ ಸಂಬಂಧಿ ಅಂತ ಹೇಳೊದಿಲ್ಲ, ಅವರು ಸಿದ್ದರಾಮಯ್ಯ ಅವರ ಸಮಾಜದವರು. ಆ ಹಿರಿಯ ಹುದ್ದೆಗೆ ಅತ್ಯಂತ ಕಿರಿಯ ಅಧಿಕಾರಿಯನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಏಕೆ? ಎಂದು ಪ್ರಶ್ನಿಸಿದರು.

ಜನಪರ ಕಳಕಳಿಯ ಸರಕಾರ ನನ್ನದು ಅಂತಾರೆ ಸಿದ್ದರಾಮಯ್ಯ. ಕುಮಾರಸ್ವಾಮಿ ಅವರ ಪಂಚರತ್ನ, ಜಲಧಾರೆ ಕಾರ್ಯಕ್ರಮ ಮಾಡಿದ್ದರಲ್ಲವೇ? ಅವರಿಗೆ ಜನಪರ ಕಳಕಳಿ ಇರಲಿಲ್ಲವಾ? ಅವರ ಸರಕಾರ ತೆಗೆದಿದ್ದು ಯಾರು ಹಾಗಾದರೆ? ನೀವು ಮಾಡಿದ ಎಲ್ಲಾ ಕಾರ್ಯಕ್ರಮ ಅನುಷ್ಠಾನ ಮಾಡಿದ್ದು ಕುಮಾರಸ್ವಾಮಿ. ಇಂಥ ನೀವು ಜೆಡಿಎಸ್ ಪಕ್ಷ ಉಳಿಯೊಲ್ಲ ಅಂತೀರಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಮುದುಕಪ್ಪನಿಗೆ ಸ್ವಾಭಿಮಾನ ಇದೆ:

ಮಂಡ್ಯದ ನಾಯಕರೊಬ್ಬರು ತುಂಬಾ ಎತ್ತರಕ್ಕೆ ಬೆಳೆದಿದ್ದಾರೆ. ತುಂಬಾ ತುಂಬಾ ಎತ್ತರಕ್ಕೆ ಬೆಳೆದಿದ್ದಾರೆ. ಅ ಮುದುಕಪ್ಪನನ್ನ ಕಟ್ಟಿಕೊಂಡು ಏನೇನೋ ಮಾಡೋಕೆ ಹೋಗ್ತಿದ್ದಾರೆ ಅಂತಾರೆ. ಅ ಮುದುಕಪ್ಪನಿಗೆ ಸ್ವಾಭಿಮಾನ ಇದೆ. ಈ ಪಕ್ಷ ಉಳಿಸೋದು ಕಾವೇರಿ ನೀರಿಗಾಗಿ, ನಿಮಗೆ ಮಾತಾಡೋ ಯೋಗ್ಯತೆ ಇಲ್ಲ. ಹೇಮಾವತಿ ಕಟ್ಟಿರೋನು, ಹಾರಂಗಿ ಕಟ್ಟಿರೋನು ನಿಮ್ಮ ಮುಂದೆ ಇದ್ದೇನೆ ಎಂದು ಮಾಜಿ ಪ್ರಧಾನಿಗಳು ಸಚಿವ ಚೆಲುವರಾಯಸ್ವಾಮಿ ವಿರುದ್ದ ಗುಡುಗಿದರು.

ಈ ಸಂದರ್ಭದಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಬೆಂಗಳೂರು ನಗರ ಘಟಕದ ಅಧ್ಯಕ್ಷರಾದ ಹೆಚ್.ಎಂ.ರಮೇಶ್ ಗೌಡ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರು ಹಾಜರಿದ್ದರು.

RELATED ARTICLES

Related Articles

TRENDING ARTICLES