ಬೀದರ್ : 218 ರೂಪಾಯಿಯ ಕೇಸ್ ಕ್ಲೋಸ್ ಮಾಡಲು ಕಂಡಕ್ಟರ್ನಿಂದ ಹಣ ಪಡೆಯುವಾಗ ಬಸವಕಲ್ಯಾಣ ಡಿಪೋ ಕಂಡಕ್ಟರ್ ರವಿ ಹಾಗೂ ಬೀದರ್ ವಿಭಾಗೀಯ ಕಚೇರಿಯ ಡಾಟಾ ಆಪರೇಟರ್ ಮಂಜುನಾಥ್ ಲೋಕಾ ಬಲೆಗೆ ಬಿದ್ದಿದ್ದಾರೆ.
ವಿದ್ಯಾಧರ್ ಎಂಬುವವರು ಹುಮನಾಬಾದ್ ಡಿಪೋದಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರಿಂದ 218 ರೂಪಾಯಿಯ ಕ್ಲೋಸ್ ಮಾಡಲು ರವಿ ಎಂಬ ಕಂಡಕ್ಟರ್ ಮೂಲಕ ಡಾಟಾ ಆಫರೇಟರ್ ಮಂಜುನಾಥ್ 35 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು.
ಬಸವಕಲ್ಯಾಣ ಪಟ್ಟಣದಲ್ಲಿ 35 ಸಾವಿರ ಹಣ ಪಡೆಯುವಾಗ ರವಿ ಎಂಬಾತನನ್ನ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಖೆಡ್ಡಾಕ್ಕೆ ಕೆಡವಿದ್ದಾರೆ. ಬಳಿಕ ಆತನನ್ನ ವಿಚಾರಿಸಿದಾಗ ಬೀದರ್ ವಿಭಾಗೀಯ ಕೇಂದ್ರ ಕಚೇರಿಯಲ್ಲಿ ಡಾಟಾ ಆಪರೇಟರ್ ಆಗಿ ಕೆಲಸ ಮಾಡುವ ಮಂಜುನಾಥ್ ಅವರಿಗೆ ಹಣವನ್ನ ನೀಡಲಾಗುತ್ತದೆ ಎಂದಿದ್ದಾನೆ. ಆರೋಪಿ ರವಿಯನ್ನು ಬೀದರ್ ನಗರದ ಕೇಂದ್ರ ಕಚೇರಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಬೀದರ್ ಕೇಂದ್ರ ಕಚೇರಿಯಲ್ಲಿ ಮಂಜುನಾಥ್ ಹಾಗೂ ರವಿ ಇಬ್ಬರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಎನ್.ಎಂ ಒಲೇಕಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.