ರಾಯಚೂರು : ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ದಾಹ ತೀರಿಸಿಕೊಳ್ಳಲು ಕೆರೆಗೆ ಇಳಿದು ನೀರುಪಾಲಾದ ಘಟನೆ ಪೆಚಲಬಂಡ ಕ್ಯಾಂಪ್ನಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಪೆಚಲಬಂಡ ಕ್ಯಾಂಪ್ನಲ್ಲಿ ನಡೆದಿದೆ. ಲಕ್ಷ್ಮಿ (19) ಕೆರೆಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿ.
ಎಂದಿನಂತೆ ಅಕ್ಕ-ತಂಗಿ ಇರಿಬ್ಬರು ಕುರಿ ಕಾಯಲು ಕ್ಯಾಂಪ್ ಹೊರ ವಲಯಕ್ಕೆ ತೆರಳಿದ್ದರು. ಈ ವೇಳೆ ಅಕ್ಕ ಲಕ್ಷ್ಮಿಗೆ ಬಾಯಾರಿಕೆಯಾಗಿದ್ದು, ಪಕ್ಕದ ಜಮೀನಿನಲ್ಲಿದ್ದ ಕೆರೆಗೆ ನೀರು ಕುಡಿಯಲು ಹೋಗಿದ್ದಳು. ಆದರೆ, ದುರದೃಷ್ಟವಶಾತ್ ಕಾಲು ಜಾರಿ ಬಿದ್ದು ಕೆರೆಯಲ್ಲಿ ಮುಳುಗಿದ್ದಳು. ಸ್ಥಳೀಯರು ಯುವತಿಯನ್ನು ಕೆರೆಯಿಂದ ಮೇಲಕ್ಕೆ ಎತ್ತಿ, ಆಸ್ಪತ್ರೆಗೆ ಸಾಗಿಸಿದರಾದರೂ ಮಾರ್ಗ ಮಧ್ಯೆ ಲಕ್ಷ್ಮಿ ಮೃತಪಟ್ಟಿದ್ದಾಳೆ.
ಹೊಸ ಜೀವನಕ್ಕೆ ಕಾಲಿಡುವ ಮುನ್ನವೇ ದುರಂತ ಅಂತ್ಯ
ಮೃತ ಲಕ್ಷ್ಮಿ ವಿವಾಹ ನಿಶ್ಚಯವಾಗಿತ್ತು. ಮುಂದಿನ ವಾರ ಹಸೆಮಣೆ ಏರಲು ಸಜ್ಜಾಗಿದ್ದಳು. ಆದರೆ, ಹೊಸ ಜೀವನಕ್ಕೆ ಕಾಲಿಡುವ ಮುನ್ನವೇ ಯುವತಿ ದುರಂತ ಅಂತ್ಯ ಕಂಡಿದ್ದಾಳೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಾನವಿ ಪೊಲೀಸರು ಪರಿಶೀಲನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.