Friday, May 10, 2024

ದುಷ್ಟರ ಸಂಹಾರ-ಶಿಷ್ಟರ ಪಾಲನೆ ನಾಡಹಬ್ಬದ ಆಶಯ : ಸಿಎಂ ಬೊಮ್ಮಾಯಿ

ಮೈಸೂರು: ನಾಡದೇವತೆ ಚಾಮುಂಡೇಶ್ವರಿ ಅಗ್ರಪೂಜೆಯೊಂದಿಗೆ ದ್ರೌಪದಿ ಮುರ್ಮು ಅವರು ದಸರಾಗೆ ಚಾಲನೆ ನೀಡಿದ್ದಾರೆ. ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜನರಿಗೆ ದಸರಾ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಹಾಗೂ ರಾಷ್ಟ್ರಪತಿ ದಸರಾ ಉದ್ಘಾಟನೆಗೆ ಬಂದಿದ್ದು ಸಂತಸ ತಂದಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಿಎಂ ಬೊಮ್ಮಾಯಿ, ಗತವೈಭವ ನೆನಪಿಸಿಕೊಳ್ಳುವಂತೆ ಈ ಬಾರಿ ದಸರಾ ಮಹೋತ್ಸವ ಆಚರಿಸುತ್ತಿದ್ದೇವೆ. 10 ದಿನಗಳ ಕಾರ್ಯಕ್ರಮ ಒಂದು ನಾಡಹಬ್ಬ. ನಮ್ಮ ನಾಡಿನ ದುಡಿಯುವ ರೈತರು, ಕಾರ್ಮಿಕರು, ಸಾಮಾನ್ಯ ಜನರು ಮನೆಮನೆಗಳಲ್ಲಿ ನಾಡಹಬ್ಬ ಆಚರಿಸುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದೊಂದಿಗೆ ನಾಡನ್ನು ಸಮೃದ್ಧಿಯಾಗಿಡಲು ನಾವು ಪ್ರಾರ್ಥಿಸುತ್ತೇವೆ ಎಂದರು.

ಇನ್ನು, ದೇವಿ ನಮ್ಮ ಪ್ರಾರ್ಥನೆಗೆ ಓಗೊಟ್ಟು ನಮಗೆ ಆಶೀರ್ವಾದ, ಶಕ್ತಿ ಕೊಡುತ್ತಾಳೆ. ಇದು ನಮ್ಮ ಸೌಭಾಗ್ಯ. ಚಾಮುಂಡಿ ಬೆಟ್ಟದಲ್ಲಿ ಇವತ್ತು ಸ್ಥಾಪನೆಯಾಗಿರುವ ತಾಯಿಯ ಶಕ್ತಿಪೀಠವು ನಾಡಿಗೆ ಶಕ್ತಿ ಕೊಡುವ ಒಂದು ಸಂಚಲನವನ್ನು ಉಂಟು ಮಾಡಿದೆ. ಮೈಸೂರು ಮಹಾರಾಜರ ಕಾಲದಿಂದ ದೇವಿಯ ಪೂಜೆಯನ್ನು ಪ್ರಜಾಪ್ರಭುತ್ವ ಬಂದ ಮೇಲೆ ಮುಂದುವರಿಸಿಕೊಂಡು ಹೋಗಿದ್ದೇವೆ. ಗತಕಾಲದ ವೈಭವದ ಜೊತೆಗೆ ಇಂದಿನ ಪ್ರಸ್ತುತ ಕಾಲದ ಸಮಗ್ರ ಕನ್ನಡ ನಾಡಿನ ಶ್ರೇಯೋಭಿವೃದ್ಧಿಯೂ ಅಷ್ಟೇ ಮುಖ್ಯ. ಹತ್ತು ಹಲವು ನೈಸರ್ಗಿಕ ಸವಾಲುಗಳನ್ನು ಎದುರಿಸಿ ಜನಕಲ್ಯಾಣದ ಕಡೆಗೆ ದಾಪುಗಾಲು ಹಾಕುತ್ತಿದ್ದೇವೆ ಎಂದರು. ನಾವು ಆಹ್ವಾನಿಸಿದ ತಕ್ಷಣ ರಾಷ್ಟ್ರಪತಿ ದ್ರೌಪದಿ ಮುರ್ಮು ಒಪ್ಪಿಕೊಂಡರು. ದೇಶದ ಶ್ರೇಯೋಭಿವೃದ್ಧಿಗೆ ಅವರು ಚಾಮುಂಡೇಶ್ವರಿಗೆ ನಮನ ಸಲ್ಲಿಸಿದರು. ಅವರಿಗೆ ದೈವಭಕ್ತಿಯಿದೆ. ದುಷ್ಟರ ಸಂಹಾರ-ಶಿಷ್ಟರ ಪಾಲನೆ ನಾಡಹಬ್ಬದ ಆಶಯ. ಇವತ್ತು ಮಹಿಶಾಸುರ ಇಲ್ಲ. ಆದರೆ ನಮ್ಮೊಳಗಿರುವ ದುರ್ಗುಣಗಳನ್ನು ದೂರ ಇಡಬೇಕು. ಒಳ್ಳೆಯ ವಿಚಾರಗಳಿಗೆ ಪುರಸ್ಕಾರ ಕೊಟ್ಟು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಂಕಲ್ಪ ಮಾಡಬೇಕು. ಆ ಸಂಕಲ್ಪದೊಂದಿಗೆ ನಾವು ಮುಂದೆ ಹೆಜ್ಜೆ ಹಾಕುತ್ತಿದ್ದೇವೆ.

RELATED ARTICLES

Related Articles

TRENDING ARTICLES