Friday, May 10, 2024

ಸಿಡಿಲು ಬಡಿದು ತಂದೆ ಸಾವು: ಇಬ್ಬರಿಗೆ ಗಂಭೀರ‌ ಗಾಯ

ಗದಗ: ಸಿಡಿಲು ಬಡಿದು ತಂದೆ ಸ್ಥಳದಲ್ಲೇ ಸಾವನ್ನಪ್ಪಿದರೆ, ಮಗಳು,‌ ಮೊಮ್ಮಗನಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆ ಸೇರಿರುವ ಘಟನೆ ಗದಗ ಜಿಲ್ಲೆಯ ರೋಣ ಸವಡಿ ಮಾರ್ಗಮಧ್ಯೆ ನಡೆದಿದೆ.

ನರಗುಂದ ತಾಲೂಕಿನ ಶಿರಸಂಗಿ ಗ್ರಾಮದ ವ್ಯಕ್ತಿ ಅಶೋಕ ಶಿವಪಯ್ಯನಮಠ (50) ಮೃತ ದುರ್ದೈವಿಯಾಗಿದ್ದು, ಮಗಳು ಪವಿತ್ರಾ (22) ಹಾಗೂ 02 ವರ್ಷದ ಪವಿತ್ರಾಳ‌ ಮಗ ಶಿವಕುಮಾರನಿಗೆ ಗಂಭೀರ‌ ಗಾಯಗಳಾಗಿವೆ.

ಗಾಯಾಳು ತಾಯಿ‌ ಹಾಗೂ ಪುಟ್ಟ‌ ಕಂದನನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮೃತ‌ ಅಶೋಕನ ಇನ್ನೋರ್ವ ಮಗ ಈರಯ್ಯನಿಗೆ (19) ಯಾವುದೇ ಪ್ರಾಣಹಾನಿ ಇಲ್ಲದೆ ಅದೃಷ್ಟವಶಾತ್ ಪಾರಾಗಿದ್ದಾನೆ.

ನಾಲ್ಕೂ ಜನ ಬೈಕ್‌ನಲ್ಲಿ ರೋಣ ಪಟ್ಟಣದಿಂದ ಸವಡಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಜೋರಾದ ಮಳೆ ಬಂದ ಪರಿಣಾಮ ಬೈಕ್ ಬಿಟ್ಟು ರಸ್ತೆ ಮಧ್ಯೆ ನಿಂತಿದ್ದಾರೆ. ಈ ವೇಳೆ ಏಕಾಏಕಿ ಸಿಡಿಲು‌ ಬಂದು ಅಪ್ಪಳಿಸಿದಾಗ ಈ ದುರ್ಘಟನೆ ಸಂಭವಿಸಿದೆ.

ಸದ್ಯ ತಂದೆ ಅಶೋಕ ಮೃತದೇಹ ನರಗುಂದ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಈತನ ಮಗಳಾದ, ಪವಿತ್ರಾ ಹಾಗೂ ಮಗು ಶಿವಕುಮಾರನ ಸ್ಥಿತಿ ಚಿಂತಾಜನಕವಾಗಿದೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

RELATED ARTICLES

Related Articles

TRENDING ARTICLES