Friday, May 10, 2024

ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಗಜಪಡೆಯ ತಾಲೀಮು ನಡೆಯಲಿದೆ

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನು 2 ತಿಂಗಳು ಬಾಕಿಯಿದೆ. ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಗೆ ಗಜಪಡೆಯನ್ನು ಸನ್ನದ್ಧಗೊಳಿಸುವ ಕಾರ್ಯ ಆರಂಭವಾಗಿದೆ.. ಮೈಸೂರು ಅರಮನೆಯಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ತಾಲೀಮಿಗೆ ಚಾಲನೆ ನೀಡಲಾಯಿತು. ತರುವಾಯ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಗಜಪಡೆ, ಮೈಸೂರು ಅರಮನೆಯಿಂದ ಹೊರಟಿತು. ಸಾಲು ಸಾಲಾಗಿ ಸಾಗುತ್ತಿದ್ದ ಆನೆಗಳ ನೋಟ ಅತ್ಯಾಕರ್ಷಕವಾಗಿತ್ತು.

ಮೈಸೂರು ಅರಮನೆಯಿಂದ ಆರಂಭವಾದ ತಾಲೀಮು, ಚಾಮರಾಜ ಒಡೆಯರ್ ಸರ್ಕಲ್, ಆಲ್ಬರ್ಟ್ ವಿಕ್ಟರ್ ರೋಡ್, ಕೆ.ಆರ್.ಸರ್ಕಲ್, ಬಂಬೂ ಬಜಾರ್, ಹೈವೆ ಸರ್ಕಲ್ ಮೂಲಕ ಬನ್ನಿಮಂಟಪ ತಲುಪಿತು. ಹೀಗೆ ನಾಲ್ಕೂವರೆ ಕಿಲೋಮೀಟರ್ ಸಾಗಿದ ಗಜಪಡೆ ಮತ್ತೆ ಮೈಸೂರು ಅರಮನೆಯ ಆನೆ ಶಿಬಿರ ಸೇರಿತು. ಆನೆಗಳು ಸಾಗುವ ರಸ್ತೆಯನ್ನು ಒನ್ ವೇ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು. ಆನೆಗಳು ಸಾಗುವ ದೃಶ್ಯವನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ಕುತೂಹಲದಿಂದ ವೀಕ್ಷಿಸಿದರು. ಕೊರೋನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸರಳ ದಸರಾ ಆಚರಣೆ ಕಾರಣದಿಂದ ಗಜಪಡೆಗೆ ಅರಮನೆ ಒಳಗೆ ತಾಲೀಮು ನಡೆಸಲಾಗಿತ್ತು. ಆದರೆ ಈ ಬಾರಿ ಅದ್ದೂರಿ ದಸರಾ ಹಿನ್ನೆಲೆ ಗಜಪಡೆ ತಾಲೀಮು ಬನ್ನಿಮಂಟಪದ ತನಕ ಸಾಗುತ್ತಿದೆ.

ಕ್ಯಾಪ್ಟನ್ ಅಭಿಮನ್ಯು ಜೊತೆಗೆ ಗೋಪಾಲಸ್ವಾಮಿ, ಮಹೇಂದ್ರ, ಅರ್ಜುನ, ಭೀಮ, ಧನಂಜಯ, ಕಾವೇರಿ, ಚೈತ್ರ ಹಾಗೂ ಲಕ್ಷ್ಮಿ ಆನೆಗಳು ತಾಲೀಮಿನಲ್ಲಿ ಭಾಗಿಯಾಗಿದ್ವು. ದಸರಾ ಜಂಬೂಸವಾರಿ ಮೆರವಣಿಗೆ ದಿನದ ತನಕ ಇದೇ ಮಾದರಿಯಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಗಜಪಡೆಯ ತಾಲೀಮು ನಡೆಯಲಿದೆ.

ಸುರೇಶ್.ಬಿ, ಪವರ್ ಟಿವಿ, ಮೈಸೂರು

RELATED ARTICLES

Related Articles

TRENDING ARTICLES