Friday, May 10, 2024

‘ಸಿದ್ದರಾಮೋತ್ಸವ’ ಕಾಂಗ್ರೆಸ್ ಪಕ್ಷದ ಅವನತಿಗೆ ಮುನ್ನುಡಿ: ಸಚಿವ ಬಿ.ಸಿ.ಪಾಟೀಲ್

ಹಾವೇರಿ :ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಚರಿಸಲು ಸಜ್ಜಾಗಿರುವ ಕಾಂಗ್ರೆಸ್ ನಾಯಕರ ನಡೆಗೆ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನುಷ್ಯರು ಬದುಕಿದ್ದಾಗ ಯಾರಾದ್ರೂ ಉತ್ಸವ ಮಾಡ್ತಾರಾ? ದೇವರ ಉತ್ಸವ ಮಾಡುವುದನ್ನು ನೋಡಿದ್ದೇವೆ. ಕೇಳಿದ್ದೇವೆ.. ಆದರೆ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರ ಉತ್ಸವ ಮಾಡಲು ಹೊರಟಿದ್ದಾರೆ ಇದ್ಯಾವ ರೀತಿ ಆಚರಣೆ ಎಂದು ವ್ಯಂಗ್ಯವಾಡಿದರು.

ಅಲ್ಲದೇ ರಾಜ್ಯದಲ್ಲಿ ಅತಿವೃಷ್ಠಿಯಿಂದ ಜನರು ಕಂಗಾಲಾಗಿದ್ದಾರೆ. ಹಲವೆಡೆ ಪ್ರವಾಹ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ವಿಪಕ್ಷ ನಾಯಕ, ಮಾಜಿ ಸಿಎಂ ಆಗಿದ್ದವರು ಇಷ್ಟು ದೊಡ್ಡಮಟ್ಟದಲ್ಲಿ ಹುಟ್ಟುಹಬ್ಬ ಆಚರಣೆ ಎಂದು ಸಿದ್ದರಾಮೋತ್ಸವ ಮಾಡಿಕೊಳ್ಳಲು ಹೊರಟಿರುವುದು ಸರಿಯಲ್ಲ ಎಂದರು.

ಈಗಲೆ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದವರ ರೀತಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಅಧಿಕಾರಕ್ಕೆ ಕಿತ್ತಾಡೋದು ಮೂರ್ಖತನದ ಪರಮಾವಧಿ. ಜನರು ತೀರ್ಮಾನ ಮಾಡಬೇಕು. ಮುಂದಿನ ಬಾರಿಯೂ ಬಿಜೆಪಿ 150 ಸ್ಥಾನಗಳನ್ನು ಗುರಿ ಇಟ್ಟುಕೊಂಡೀವಿ. 150 ಸೀಟುಗಳನ್ನು ತಗೊಂಡು ನಾವು ಆಡಳಿತಕ್ಕೆ ಬರುತ್ತೇವೆ.ಈಗಲೆ ಗುದ್ದಾಡೋದು ಏನಾಗುತ್ತೆ ಅಂದರೆ ಅವರು ಸಿದ್ದರಾಮೋತ್ಸವ ಮಾಡಿಕೊಳ್ಳೋದು,ಇವರು ಶಿವಕುಮಾರೋತ್ಸವ ಮಾಡಿಕೊಳ್ಳೋದು ದೊಡ್ಡ ಕಂದಕ ಆಗುತ್ತದೆ. ಇನ್ನು ಇದು ಕಾಂಗ್ರೆಸ್ ಪಕ್ಷದ ಅವನತಿಗೆ ಕಾರಣವಾಗುತ್ತದೆ. ಸಿದ್ದರಾಮಯ್ಯ, ಡಿಕೆಶಿ ಕೂಸು ಹುಟ್ಟೋ‌ ಮುನ್ನವೇ ಕುಲಾವಿ ಹೊಲಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES