Wednesday, May 8, 2024

ತಮಿಳುನಾಡು ನಿರ್ಣಯ ಖಂಡಿಸಿ ಸದನದಲ್ಲಿ ಸರ್ವಾನುಮತದ ನಿರ್ಣಯ

“ತಮಿಳುನಾಡು ರಾಜ್ಯಕ್ಕೆ ಹಾನಿಯಾಗದ ಮೇಕೆದಾಟು ಯೋಜನೆಯನ್ನು ತಮಿಳುನಾಡು ವಿಧಾನಸಭೆಯಲ್ಲಿ ವಿರೋಧಿಸಿರುವುದನ್ನು ಖಂಡಿಸುತ್ತದೆ. ಮೇಕೆದಾಟು ಯೋಜನೆಗೆ ಈ ಕೂಡಲೇ ಅನುಮತಿ ನೀಡುವಂತೆ ಕೇಂದ್ರ ಜಲ ಆಯೋಗ, ಪರಿಸರ ಮತ್ತು ಜಲ ಮಂತ್ರಾಲಯ (MYF) ವನ್ನು ಒತ್ತಾಯಿಸುತ್ತದೆ. ಕಣಿಗೆ ರಾಜ್ಯಗಳ ನ್ಯಾಯಸಮ್ಮತ ಪಾಲನ್ನು ನಿರ್ಧರಿಸುವವರೆಗೂ ಗೋದಾವರಿ ಕೃಷ್ಣ ಪೆನ್ನಾರ್, ಕಾವೇರಿ, ಗುಂಡಾರ್ ಯೋಜನೆ ಜೋಡಣೆ ಯೋಜನೆಗೆ ಡಿಪಿಆರ್ ಅನ್ನು ಅಂತಿಮಗೊಳಿಸದಂತೆ ಹಾಗೂ ತಮಿಳುನಾಡುವಿನ ಕಾನೂನುಬಾಹೀರ ಯೋಜನೆಗೆ ಅನುಮತಿ ನೀಡದಂತೆ ಮತ್ತು ಈ ಯೋಜನೆಗಳನ್ನು ಮುಂದುವರೆಸದಂತೆ ಸಂಬಂಧಪಟ್ಟ ಕೇಂದ್ರ ಸಂಸ್ಥೆಗಳಿಗೆ ಒತ್ತಾಯಿಸುತ್ತದೆ”

ಈ ರೀತಿ ಇಂದು ವಿಧಾನಸಭೆಯಲ್ಲಿ ತಮಿಳುನಾಡಿನ ನಿರ್ಣಯದ ವಿರುದ್ಧ ನಿರ್ಣಯ ಮಂಡಿಸಿದ್ದು ಸಿಎಂ ಬಸವರಾಜ ಬೊಮ್ಮಾಯಿ. ಅದಕ್ಕೆ ಸಿದ್ದರಾಮಯ್ಯ ಆದಿಯಾಗಿ ಎಲ್ಲರೂ ಒಮ್ಮತದಿಂದ ಒಪ್ಪಿಕೊಂಡರೂ ಮಾಜಿ ನೀರಾವರಿ ಮಂತ್ರಿ ಹೆಚ್ ಕೆ ಪಾಟೀಲರು ಪ್ಯಾರಾ 5ರ ಒಂದು ಸೇರ್ಪಡೆಗೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಅದೆಂದರೆ ಪೆನೆನ್ಸಲಾರ್ ರಿವರ್ ಡೆವಲಪ್​ಮೆಂಟ್ ಯೋಜನೆಯನ್ನು ವಿರೋಧ ಪಕ್ಷಗಳಿಗೆ ಕೇಳದೆ ಸೇರಿಸಿದ್ದೀರ. ಇದು ಮುಂದೆ ನಮಗೆ ತುಂಬಾ ಅಪಾಯವನ್ನು ತರುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.  ಪೆನೆನ್ಸಲಾರ್ ರಿವರ್ ಡೆವಲಪ್​ಮೆಂಟ್ ಯೋಜನೆಯನ್ನು ಮೇಕೆದಾಟು ಯೋಜನೆಯ ಬಗ್ಗೆಯಿರುವ ನಿರ್ಣಯದ ಜೊತೆಗೆ ಸೇರಿಸಕೂಡದಿಂದು ಪಾಟೀಲ್ ಕೊನೆಯವರೆಗೂ ಪಟ್ಟುಹಿಡಿದರು.

ಇದಕ್ಕೆ ಸಿಎಂ ಬೊಮ್ಮಾಯಿ ಸಮಜಾಯಿಷಿ ನೀಡಲು ಪ್ರಯತ್ನಿಸಿದರೂ, ಹೆಚ್.ಕೆ.ಪಾಟೀಲ್ ಈ ಯೋಜನೆಯ ಗಂಭೀರತೆಯನ್ನು ಸದನಕ್ಕೆ ಮನದಟ್ಟು ಮಾಡಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯೂ ಆದರು. ಅವರ ವಾದವೆಂದರೆ ಪೆನೆನ್ಸಲಾರ್ ರಿವರ್ ಡೆವಲಪ್​ಮೆಂಟ್ ಯೋಜನೆಯ ಮುಖ್ಯ ಫ್ಯಾಕ್ಟರ್ ಎಂದರೆ ಆಲಮಟ್ಟಿಯಿಂದ ತುಂಗಭದ್ರಾ ಡ್ಯಾಮ್​ಗೆ ನೀರನ್ನು ತರುವುದು. ನಾವು ಈ ನಿರ್ಣಯವನ್ನು ಇಂದು ಅನುಮೋದಿಸಿದರೆ, ಆಲಮಟ್ಟಿಯಿಂದ ತುಂಗಭದ್ರಾಗೆ ನೀರನ್ನು ತರುವುದನ್ನು ನಾವು ಒಪ್ಪಿಕೊಂಡಂತಾಗುತ್ತದೆ. ತುಂಗಭದ್ರಾ ಡ್ಯಾಮ್​ಗೆ ನೀರು ಬಿದ್ದರೆ ಒನ್ ಥರ್ಡ್​ ಹಾಗೂ ಟು ಥರ್ಡ್​ ರೆಷ್ಯೂ ಮೇಲೆ ಎಲ್ಲರಿಗೂ ನೀರು ಹಂಚಿಕೆಯಾಗುತ್ತದೆ. ಇದರಿಂದ ನಾವು ಮುಂದೆ ತೊಂದರೆಗೆ ಒಳಗಾಗುತ್ತೇವೆ. ಏಕೆಂದರೆ ತಾತ್ವಿಕವಾಗಿ ನಾವು ಇದರ ಜೊತೆಗೆ ಪೆನೆನ್ಸಲಾರ್ ಯೋಜನೆಗೂ ತಾತ್ವಿಕ ಒಪ್ಪಿಗೆ ಕೊಟ್ಟಿರುತ್ತೇವೆ ಎಂದರು. ಕೊನೆಗೆ ಸಿದ್ದರಾಮಯ್ಯನವರು ಈ ಪ್ರಸ್ತಾವನೆಯಲ್ಲಿ ಪೆನೆನ್ಸಲಾರ್ ಯೋಜನೆಯನ್ನು ಒಪ್ಪುವುದಿಲ್ಲ ಎಂದು ಸೇರಿಸಿ ಎಂದು ಹೇಳಿದಾಗ ಬೊಮ್ಮಾಯಿ ಅದಕ್ಕೆ ಒಪ್ಪಿಕೊಂಡು ತಿದ್ದುಪಡಿ ಮಾಡಿದರು. ನಂತರ ಸಭಾದ್ಯಕ್ಷರು ಇದನ್ನು ನಿರ್ಣಯಕ್ಕೆ ಹಾಕಿ ಸರ್ವಾನುಮತದಿಂದ ಇದನ್ನು ಅಂಗೀಕರಿಸಿದರು. 

ಓಂಪ್ರಕಾಶ್ ನಾಯಕ್, ಪವರ್ ಟಿವಿ

RELATED ARTICLES

Related Articles

TRENDING ARTICLES