ಚಿಕ್ಕಮಗಳೂರು: ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದೂ ನನ್ನ ಹೆಸರು ಹೇಳದೇ ಇದ್ದರೆ ಕುಮಾರಸ್ವಾಮಿಗೆ ನಿದ್ದೆಯೇ ಬರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾದ್ಯಮ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮೇಲೆ ಆರೋಪ ಮಾಡದಿದ್ದರೆ ಮಾರ್ಕೆಟ್ನಲ್ಲಿ ಸುದ್ದಿ ಓಡಲ್ಲ. ನನ್ನ ಹೆಸರು ಇರದಿದ್ದರೆ ನೀವು ತೋರಿಸುವುದಿಲ್ಲ. ಕಥಾನಾಯಕ, ನಿರ್ಮಾಪಕ, ನಿರ್ದೇಶಕ ಎಲ್ಲಾ ಎಲ್ಲಾ ಇವರೇ ಎಂದು ಕಿಡಿಕಾರಿದರು.
ಪೆನ್ ಡ್ರೈವ್ ವಿಚಾರ ಎಲ್ಲವೂ ಕುಮಾರಸ್ವಾಮಿಗೆ ಗೊತ್ತಿದೆ. ಕುಮಾರಣ್ಣನಿಗೆ ನನ್ನ ರಾಜೀನಾಮೆ ಬೇಕಂತೆ. ಒಕ್ಕಲಿಗ ನಾಯಕರ ಪೈಪೋಟಿಯಂತೆ. ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಹೆದರಿಸುವುದೇ ಇವರ ಕೆಲಸ. ಕುಮಾರಸ್ವಾಮಿ ಕಿಂಗ್ ಆಫ್ ಬ್ಲಾಕ್ಮೇಲ್. ಚರ್ಚೆ ಮಾಡಲು ಸದನ ಇದೆ. ಎಲ್ಲವನ್ನೂ ತಗೆದುಕೊಂಡು ಬರಲಿ ಚರ್ಚೆ ಮಾಡೋಣ ಎಂದರು.
ಅವರದ್ದೇ ಬೇರೆ ಫ್ಯಾಮಿಲಿ ನಮ್ಮದೇ ಬೇರೆ ಫ್ಯಾಮಿಲಿ ಎಂದಿದ್ದಾರೆ. ಉಪ್ಪು ತಿಂದವನು ನೀರು ಕುಡಿಬೇಕು ಎಂದವರು ಈಗ ಯಾಕೆ ಉರಿ ಮಾಡಿಕೊಳ್ಳುತ್ತಿದ್ದಾರೆ. ಇವರು ಲಾಯರ್ರಾ? ಜಡ್ಜಾ? ಹೋಗಿ ವಾದ ಮಾಡಲಿ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆ ಮುಗಿದ ಬಳಿಕ ಚಿಕ್ಕಮಗಳೂರು ಹೊರವಲಯದಲ್ಲಿರುವ ಸೆರಾಯ್ ರೆಸಾರ್ಟ್ಗೆ ಡಿಕೆ ಶಿವಕುಮಾರ್ ತಮ್ಮ ಕುಟುಂಬದ ಸದಸ್ಯರ ಜೊತೆ ಆಗಮಿಸಿದ್ದಾರೆ. ಇಂದು ಬೆಳಗ್ಗೆ ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಹಾಗೂ ಮಾಜಿ ಪರಿಷತ್ ಸದಸ್ಯೆ ಗಾಯತ್ರಿ ಶಾಂತಗೌಡ ಮತ್ತು ಜಿಲ್ಲಾ ಘಟಕದ ಪ್ರಮುಖ ಮುಖಂಡರ ಜೊತೆ ಉಪಹಾರ ಸೇವಿಸುತ್ತಾ ಚರ್ಚೆ ನಡೆಸಿದರು.