ರಾಮನಗರ : ಇದು ದೇಶದ ಚುನಾವಣೆ. ನಮ್ಮದು ಪ್ರಾದೇಶಿಕ ಪಕ್ಷ, ಹಾಗಾಗಿ, ನಾವು ದುರಾಸೆಗೆ ಬಿದ್ದಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ದೇಶದ ಅಭಿವೃದ್ಧಿಗೆ ಮೋದಿಯವರನ್ನು ಗೆಲ್ಲಿಸಬೇಕು. ನಾವು ಹೆಚ್ಚು ಸ್ಥಾನ ಗೆಲ್ಲಿಸಿ, ಕರ್ನಾಟಕದಿಂದ ಗಿಫ್ಟ್ ಕೊಡಬೇಕು. ಒಟ್ಟಾಗಿ ಕೆಲಸ ಮಾಡ್ತೇವೆ ಎಂದು ತಿಳಿಸಿದರು.
ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡ್ತಾರಾ? ಎಂಬ ಪ್ರಶ್ನೆಗೆ, ಮಂಡ್ಯದಲ್ಲಿ ಮೊನ್ನೆ ಸಭೆ ಮಾಡಿದ್ದೇವೆ. ಅದರಲ್ಲಿ ಬಹುತೇಕರು ನನ್ನ ಸೋಲಿನ ಬಗ್ಗೆ ನೋವನ್ನು ವ್ಯಕ್ತಪಡಿಸಿದ್ದಾರೆ. ನಾನು ಮತ್ತೆ ಸ್ಪರ್ಧೆ ಮಾಡಬೇಕು ಅಂತ ಅಭಿಪ್ರಾಯ ತಿಳಿಸಿದ್ದಾರೆ. ಅದನ್ನ ನಾನು ಗೌರವಿಸುತ್ತೇನೆ ಎಂದು ಹೇಳಿದರು.
ಸ್ಪರ್ಧೆ ಬಗ್ಗೆ ವರಿಷ್ಠರು ತೀರ್ಮಾನ ಮಾಡ್ತಾರೆ
ನಮ್ಮ ತಂದೆ ಹೆಚ್.ಡಿ. ಕುಮಾರಸ್ವಾಮಿ ಅವರೂ ಬರಲಿ ಎನ್ನುವ ಒತ್ತಡ ಇದೆ. ಆದರೆ, ಮಂಡ್ಯದಲ್ಲಿ ಜೆಡಿಎಸ್ ಸಮರ್ಥವಾಗಿ ಬೆಳೆಸಿರೋದು ಮುಖಂಡರು, ಕಾರ್ಯಕರ್ತರು. ಹಾಗಾಗಿ, ಸ್ಪರ್ಧೆ ಬಗ್ಗೆ ನಮ್ಮ ವರಿಷ್ಠರು ತೀರ್ಮಾನ ಮಾಡ್ತಾರೆ. ನನ್ನ ಆಸಕ್ತಿ ಇರೋದು ಪಕ್ಷವನ್ನ ಬಲಿಷ್ಠವಾಗಿ ಕಟ್ಟಬೇಕು ಅನ್ನೋದು ಎಂದು ತಮ್ಮ ಸ್ಪರ್ಧೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.