ಮಂಡ್ಯ: ನನ್ನ ವಿರುದ್ಧ ನಿಂತಿದ್ದ ತಾಯಿ ಗೆಲುವಿಗೆ ಕಾಂಗ್ರೆಸ್ ಕಾರಣ ಎಂದು ಸುಮಲತಾ ವಿರುದ್ಧ ಸೋಲಿನ ಬಗ್ಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕರು ಮಂಡ್ಯದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಸೋಲಿನ ಆ ದಿನಗಳನ್ನ ನೆನೆದು ಭಾವುಕರಾಗಿ ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ ಎಂದು ಹೇಳಿದ್ದಾರೆ.
ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ನಿಖಿಲ್, 2019ರ ಲೋಕಸಭಾ ಚುನಾವಣೆಯಲ್ಲಿ ನನಗೆ ರಾಜಕೀಯದ ಅನುಭವ ಇರಲಿಲ್ಲ. ಆಗ ಬಹಳ ಚಿಕ್ಕ ಹುಡುಗ ನಾನು. ಕಾರ್ಯಕರ್ತರು, ಮುಖಂಡರ ಅಭಿಪ್ರಾಯದಂತೆ ಸ್ಫರ್ಧೆ ಮಾಡಿದೆ. 5.75 ಲಕ್ಷ ಜನ ನನಗೆ ಮತ ನೀಡಿದ್ದರು. ಚುನಾವಣೆಗೂ ಮುನ್ನ ದೇವೇಗೌಡರ ಕಾಲು ಕಟ್ಟಿ ಕೇಳಿಕೊಂಡಿದ್ದೆ. ಮಂಡ್ಯ ಅಭ್ಯರ್ಥಿ ಆಗುವಂತೆ ಮನವಿ ಮಾಡಿದ್ದೆ. 2019ರ ಸೋಲಿನ ನೋವು, ಭಾರ ಮನಸ್ಸಿನಲ್ಲಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಸಮಾವೇಶದಲ್ಲಿ ಸಿಎಂ ಭಾಷಣ ಮಾಡುತ್ತಾ ನನ್ನ ಸೋಲಿಸಿದ್ದಾಗಿ ಹೇಳಿದ್ದಾರೆ. ನನ್ನ ವಿರುದ್ಧ ನಿಂತಿದ್ದ ತಾಯಿ ಗೆಲುವಿಗೆ ಕಾಂಗ್ರೆಸ್ ಕಾರಣ ಎಂದ್ರು. ಆ ತಾಯಿ ಬಗ್ಗೆ ಮಾತನಾಡುವುದು ಬೇಡ ಈಗ ನಮ್ಮ ಜೊತೆಯಲ್ಲಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋಣ. ಆದರೆ ಅದೇ ವೇದಿಕೆಯಲ್ಲಿ ಪ್ರಮಾಣಿಕವಾಗಿ ನನ್ನ ಪರ ಚುನಾವಣೆ ಮಾಡಿದ್ದೆ ಎಂದು ಡಿಸಿಎಂ ಹೇಳಿದ್ದಾರೆ. ನನಗೆ ಅರ್ಥ ಆಗ್ತಿಲ್ಲ. ಒಬ್ಬೊಬ್ಬರದ್ದು ಒಂದೊಂದು ಹೇಳಿಕೆ ಎಂದು ನಿಖಿಲ್ ಕುಮಾರಸ್ವಾಮಿ ಡಿ.ಕೆ ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.