ಬೆಂಗಳೂರು : ‘ನೋಡ್ರಿ ಎಲ್ಲರಿಗೆ ಏನು ಇದೆ ಅದನ್ನು ಮಾಡಿ, ಮೋಸ ಮಾಡೋದಕ್ಕೆ ಹೋಗಬೇಡಿ. ಎಷ್ಟಿದೆ. ಉಳಿದಿದ್ದು ನಾಳೆ ತಲುಪಿಸಿಬಿಡಿ..’
ಇದು, ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೆಡಿಎಸ್ ಶಾಸಕನ ಮಾತುಗಳು. ವಿಜಯಪುರ ಜಿಲ್ಲೆ ನಾಗಠಾಣಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಗುಲ್ ಸಿಂಗ್ ಚೌಹಾಣ್ ನಮ್ಮ ಪ್ರತಿನಿಧಿಯೊಂದಿಗೆ ಡೀಲ್ ನಡೆಸಿದ್ದಾರೆ. ಇವರೇ ಪವರ್ ಬೇಟೆಯಲ್ಲಿ ಸಿಕ್ಕಿಬಿದ್ದ 32ನೇ ಬಲಿ.
ಪವರ್ ಟಿವಿ ಸ್ಟಿಂಗ್ ತಂಡದ ಜೊತೆಗೆ ಡೀಲ್ ಗೆ ಇಳಿದ ಶಾಸಕರು, ‘ಖುಷಿಯಿಂದ ಏನು ಮಾಡುತ್ತೀರೋ ಅದನ್ನು ಮಾಡಿ. ಖುಷಿಯಿದ್ರೆ ಮಾಡಿ, ಇಲ್ಲವಾದರೆ ಇಲ್ಲ. ನಮ್ಮದೂ ಎಲೆಕ್ಷನ್ ಖರ್ಚು, ಪ್ರಾಬ್ಲಂ ಇರುತ್ತದಲ್ಲಾ. ಹಾಗೆ ಕೊಡೋಕೆ ಅನ್ನಿಸ್ತು ಅಂದ್ರೆ ಕೊಡಿ, ಇಲ್ಲದಿದ್ದರೆ ಬೇಡ’ ಎಂದು ನಯವಾಗಿಯೇ ಡೀಲ್ ಕುದುರಿಸಿದ್ದಾರೆ.
ಬಿಜೆಪಿಯವರು ಬಂದು ದರ ಜಾಸ್ತಿ ಮಾಡಿದ್ದಾರೆ ಅಲ್ವೇ.. ಇವತ್ತು ದರಿದ್ರ ಸರ್ಕಾರ ಇರೋದು. ಮೂರು ಪರ್ಸೆಂಟ್ ಗೆ ಹೋಗುತ್ತಿದುದು ಈಗ ಎಲ್ಲಿಗೆ ಬಂದು ಮುಟ್ಟಿದೆ. ದೇವರು ಇಟ್ಟ ಹಾಗೆ ಆಗುತ್ತದೆ. ನೋಡಿ ಇದನ್ನು ಸ್ವಲ್ಪ ನಾಳೆಗೆ ಮಾಡಿಕೊಡಿ. ನಿಮಗೆ ಲಾಭ ಇದೆ ಅನ್ನೋದಾದ್ರೆ ಕೊಡಿ, ಕಷ್ಟ ಮಾಡಿಕೊಂಡು, ಮನಸ್ಸಿಗೆ ನೋವು ಮಾಡಿಕೊಂಡು ಕೊಡಬೇಡಿ ಎಂದು ಶಾಸಕ ದೇವಾನಂದ ಗುಲ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ನಾಗಠಾಣ ಕ್ಷೇತ್ರದಲ್ಲಿ ಓಎಫ್ಸಿ ಕೇಬಲ್ ಅಳವಡಿಕೆ ಸಂಬಂಧ ನೇರವಾಗಿ ಶಾಸಕ ದೇವಾನಂದ ಚೌಹಾಣ್ ನಮ್ಮ ಸ್ಟಿಂಗ್ ತಂಡದ ಜೊತೆ ಡೀಲ್ ಮಾತುಕತೆ ನಡೆಸಿದರು. ಕೇಬಲ್ ಅಳವಡಿಕೆಗೆ ಪರ್ಮಿಶನ್ ನೀಡಲು ಲಂಚದ ಬಗ್ಗೆ ಪ್ರಸ್ತಾಪ ಮಾಡಿದರು. ಪ್ರತೀ ಕಿಲೋಮೀಟರ್ಗೆ 1 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟರು. ಅಡ್ವಾನ್ಸ್ ರೂಪದಲ್ಲಿ ಒಂದು ಲಕ್ಷ ರೂಪಾಯಿ ಪಡೆಯಲು ಒಪ್ಪಿದ ಶಾಸಕರು, ಟೇಬಲ್ ಮೇಲಿದ್ದ ಹಣವನ್ನು ಸಲೀಸಾಗಿ ಸಹಾಯಕನ ಮೂಲಕ ಜೇಬಿಗಿಳಿಸಿದ್ದಾರೆ.
ಹೆಸರು: ದೇವಾನಂದ ಚೌಹಾಣ್
ಕ್ಷೇತ್ರ: ನಾಗಠಾಣ
ಪಕ್ಷ: ಜೆಡಿಎಸ್
ಜಿಲ್ಲೆ: ವಿಜಯಪುರ
ಸ್ಥಳ: ಶಾಸಕರ ಭವನ, ಬೆಂಗಳೂರು
ಬೇಡಿಕೆ: ತಮಗೆ ತಿಳಿದಷ್ಟು!